ನಾಗ್ಪುರ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಎಟಪಲ್ಲಿ ತೆಹ್ಸೀಲ್ನಲ್ಲಿರುವ ಸುರ್ಜಗಡದಲ್ಲಿ ಗಣಿಗಾರಿಕೆ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಆದಿವಾಸಿ ಮುಖಂಡರನ್ನು ಶುಕ್ರವಾರ ಬಂಧಿಸಿದ್ದ ಪೊಲೀಸರು ನಂತರ ಬಿಡುಗಡೆ ಮಾಡಿದ್ದಾರೆ.
ಸುರ್ಜಗಡದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಯೋಜನೆಯನ್ನು ವಿರೋಧಿಸಿ ಹಾಗೂ ಖಾಸಗಿ ಕಂಪನಿಗೆ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸುವಂತೆ ಕೋರಿ ಸ್ಥಳೀಯರು ಐದು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
‘ಸ್ಥಳೀಯರಿಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿತ್ತೇ ಹೊರತು ಧರಣಿ ನಡೆಸಲು ಅಲ್ಲ. ಜಿಲ್ಲಾ ಪಂಚಾಯ್ತಿ ಸದಸ್ಯ ಸೈನು ಗೋಟಾ ಮತ್ತು ಶೇಟ್ಕರಿ ಕಾಮಗಾರಿ ಪಕ್ಷದ ರಾಮದಾಸ್ ಜರಾಟೆ ಅವರೊಂದಿಗೆ ಸ್ಥಳೀಯರು ಜತೆಗೂಡಿ ಸೋಮವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಧರಣಿಯಲ್ಲಿದ್ದ ಕೆಲವು ಮುಖಂಡರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಗಿದೆ’ ಎಂದು ಗಡ್ಚಿರೋಲಿ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ತಿಳಿಸಿದ್ದಾರೆ.