ಮಥುರಾ: ದೋಸೆ ಮಾರಾಟ ಅಂಗಡಿಗೆ ಹಿಂದೂ ದೇವರ ಹೆಸರು ಇಟ್ಟಿದ್ದ ಮುಸಲ್ಮಾನ ವ್ಯಕ್ತಿಗೆ ಬೆದರಿಕೆ ಒಡ್ಡಿದ ಆರೋಪದಡಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತ ಶ್ರೀಕಾಂತ್ ಇಲ್ಲಿನ ಚಂದ್ರಲೋಕ ಬಡಾವಣೆಯ ನಿವಾಸಿ. ಆತ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಕೊತ್ವಾರಿ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಆರೋಪಿ ಯಾವುದೇ ಪಕ್ಷದ ಜೊತೆಗೆ ಗುರುತಿಸಿಕೊಂಡಿಲ್ಲ. ಶ್ರೀನಾಥ್ ದೋಸಾ ಕಾರ್ನರ್ ಹೆಸರಿನ ಫಲಕವನ್ನು ಕಿತ್ತು, ಬೆದರಿಕೆ ಒಡ್ಡಿದ್ದ ವಿಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.
ವಿಡಿಯೊ ಪ್ರಕಾರ, ಏಕೆ ಅಂಗಡಿಗೆ ಮುಸ್ಲಿಂ ಹೆಸರಿಟ್ಟಿಲ್ಲ ಎಂದು ವ್ಯಾಪಾರಿಯನ್ನು ಪ್ರಶ್ನಿಸಲಾಗಿತ್ತು. ಘಟನೆಯು ಆಗಸ್ಟ್ 18ರಂದು ನಡೆದಿತ್ತು. ಈ ಕುರಿತು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.