ಮುಂಬೈ: ಪಾಲ್ಗರ್ ಜಿಲ್ಲೆಯ ವಿಜಯನಗರದಲ್ಲಿ ಹಾರ್ದಿಕ್ ಶಾ ಎಂಬಾತ, ಪತ್ನಿಯನ್ನು ಕೊಂದು, ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿಟ್ಟಿದ್ದ. ವಾಸನೆಯಿಂದಾಗಿ ಶವವಿರುವುದು ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶದಿಂದ ಆರೋಪಿಯು ಅಗರಬತ್ತಿಗಳನ್ನು ಹಚ್ಚಿಟ್ಟಿದ್ದ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮನೆಯಲ್ಲಿನ ವಸ್ತುಗಳನ್ನು ಮಾರಾಟ ಮಾಡಿ, ಹರಿದ್ವಾರಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದ ಹಾರ್ದಿಕ್, ಖರೀದಿದಾರರನ್ನು ಮನೆಗೆ ಆಹ್ವಾನಿಸಿದ್ದ. ಅವರಿಗೆ, ಕೊಳೆತ ಶವದ ವಾಸನೆ ಬಾರದಂತೆ ಮಾಡುವ ಸಲುವಾಗಿ ಈ ಉಪಾಯ ಮಾಡಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಫೆ.14ರಂದು ಮಧ್ಯಪ್ರದೇಶದ ನಾಗದಾ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹಣದ ವಿಚಾರವಾಗಿ ಪತ್ನಿ ಮೇಘಾ ಹಾಗೂ ಹಾರ್ದಿಕ್ ನಡುವೆ ಫೆ.11ರಂದು ಜಗಳವಾಗಿತ್ತು. ಜಗಳ ವಿಕೋಪಕ್ಕೆ ಹೋದಾಗ, ಟವೆಲ್ನಿಂದ ಕುತ್ತಿಗೆಗೆ ನೇಣು ಬಿಗಿದು ಪತ್ನಿಯನ್ನು ಕೊಲೆ ಮಾಡಿದ್ದ ಹಾರ್ದಿಕ್, ಶವವನ್ನು ಹಾಸಿಗೆಯಲ್ಲಿ ಸುತ್ತಿಟ್ಟಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.