ನವದೆಹಲಿ: ಛತ್ತೀಸ್ಗಡದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅಪಹರಿಸಲಾಗಿರುವ ಕೋಬ್ರಾ ಕಮಾಂಡೊ ಅಧಿಕಾರಿ ಬಿಡುಗಡೆಗಾಗಿ ಮಧ್ಯಸ್ಥಗಾರರನ್ನು ಕಳುಹಿಸಿ ಎಂದು ಮಾವೊವಾದಿ ನಕ್ಸಲರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಹೇಳಲಾಗಿದೆ.
ಸಿಪಿಐನ ‘ದಂಡಕಾರಣ್ಯ ವಿಶೇಷ ವಲಯ ಸಮಿತಿ (ಡಿಎಸ್ಝಡ್ಸಿ) ಈ ಪತ್ರವನ್ನು ಮಂಗಳವಾರ ಬರೆದಿದೆ ಎಂದು ಹೇಳಲಾಗಿದೆ. ‘ಅಪಹೃತ ಕಮಾಂಡೊ ಅಧಿಕಾರಿ ನಮ್ಮ ವಶದಲ್ಲಿ ಸುರಕ್ಷಿತವಾಗಿದ್ದು, ಸಂಧಾನ ಪ್ರಕ್ರಿಯೆ ನಂತರ ಆತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗುವುದು’ ಎಂಬುದಾಗಿ ಪತ್ರದಲ್ಲಿ ವಿವರಿಸಲಾಗಿದೆ.
‘ಈ ಪತ್ರದಲ್ಲಿ ಉಲ್ಲೇಖಿಸಿರುವ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹಿರಿಯ ಭದ್ರತಾ ಪಡೆ ಅಧಿಕಾರಿ ಹಾಗೂ ಸಿಆರ್ಪಿಎಫ್ನ ಕಮಾಂಡರ್ ಪ್ರತಿಕ್ರಿಯಿಸಿದ್ದಾರೆ.
ಬಿಜಾಪುರ ಹಾಗೂ ಸುಕ್ಮಾ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯದಲ್ಲಿ ಸಿಆರ್ಪಿಎಫ್, ಡಿಆರ್ಜಿ, ಎಸ್ಟಿಎಫ್ ಜಂಟಿಯಾಗಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದವು. ಈ ವೇಳೆ ನಕ್ಸಲರು ನಡೆಸಿದ ಹೊಂಚುದಾಳಿಯಲ್ಲಿ 22 ಯೋಧರು ಸಾವನ್ನಪ್ಪಿದ್ದರು.