ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆಲಸ ಮಾಡು ಎನ್ನುವುದು ಕ್ರೌರ್ಯವಲ್ಲ: FIR ರದ್ದು ಮಾಡಿದ ಬಾಂಬೆ ಹೈಕೋರ್ಟ್‌

ಪತಿಯ ವಿರುದ್ಧ ವಿವಾಹಿತೆ ಸಲ್ಲಿಸಿದ್ದ ದೂರು
Last Updated 27 ಅಕ್ಟೋಬರ್ 2022, 16:07 IST
ಅಕ್ಷರ ಗಾತ್ರ

ಮುಂಬೈ: ತನ್ನ ಕುಟುಂಬಕ್ಕಾಗಿ ಮನೆಗೆಲಸ ಮಾಡುವಂತೆ ವಿವಾಹಿತೆಯನ್ನು ಒತ್ತಾಯಿಸುವುದು ಕ್ರೌರ್ಯವಲ್ಲ. ಜೊತೆಗೆ ಮನೆಗೆಲಸ ಮಾಡು ಎನ್ನುವುದು ವಿವಾಹಿತೆಯನ್ನು ಮನೆಗೆಲಸದವರಿಗೆ ಹೋಲಿಸಿದಂತೆ ಅಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠ ಹೇಳಿದೆ.

ಪತಿ ಹಾಗೂ ಆತನ ಪೋಷಕರ ವಿರುದ್ಧ ವಿವಾಹಿತೆಯೊಬ್ಬರು ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಾಗಿತ್ತು. ನ್ಯಾಯಮೂರ್ತಿಗಳಾದ ವಿಭಾ ಕಂಕನ್‌ವಾಡಿ ಮತ್ತು ರಾಜೇಶ್‌ ಪಾಟೀಲ್‌ ಅವರು ಈ ಎಫ್‌ಐಆರ್‌ ಅನ್ನು ಅ.21ರಂದು ರದ್ದು ಮಾಡಿದ್ದರು.

‘ಮದುವೆ ಆದ ಒಂದು ತಿಂಗಳವರೆಗೆ ಎಲ್ಲರೂ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ನಂತರ, ನನ್ನನ್ನು ಮನೆಗೆಲಸದವಳಂತೆ ಕಾಣತೊಡಗಿದರು. ಜೊತೆಗೆ ಕಾರು ಖರೀದಿಸಲು ₹4 ಲಕ್ಷ ಕೊಡುವಂತೆ ಬೇಡಿಕೆ ಇಟ್ಟರು. ಅದಕ್ಕಾಗಿ ಒತ್ತಾಯಪಡಿಸಿದರು. ಹಣ ನೀಡುವಂತೆ ಪತಿಯು ನನ್ನ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ನಡೆಸಿದ್ದಾರೆ’ ಎಂದು ಮಹಿಳೆಯು ದೂರಿನಲ್ಲಿ ಹೇಳಿದ್ದರು. ವಿವಾಹಿತೆಯು ಸದ್ಯ ಪತಿಯೊಂದಿಗೆ ವಾಸವಿಲ್ಲ.

‘ಮಹಿಳೆಯು ದೂರಿನಲ್ಲಿ ದೌರ್ಜನ್ಯವಾಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ, ಯಾವು ರೀತಿಯ ದೌರ್ಜನ್ಯವಾಗಿದೆ ಎಂದು ವಿವರಿಸಿಲ್ಲ’ ಎಂದು ನ್ಯಾಯಾಲಯವ ಅಭಿಪ್ರಾಯಪಟ್ಟಿದೆ.

ಮಹಿಳೆಯು ಆಕೆಯ ಪತಿ ಕುರಿತು ಮಾಡಿದ ಆರೋಪವು ಸೆಕ್ಷನ್‌ 498ಎ ಅಡಿ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು, ಎಫ್‌ಐಆರ್ ರದ್ದು ಮಾಡಬೇಕು ಎಂದು ವಿವಾಹಿತೆಯ ಪತಿ ಮತ್ತು ಆತನ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತು.

ಕೋರ್ಟ್‌ ಹೇಳಿದ್ದೇನು?
* ಮನೆಗೆಲಸ ಮಾಡುವ ಇಚ್ಛೆ ಇಲ್ಲದಿದ್ದರೆ, ಮದುವೆಗೂ ಮೊದಲೇ ಇದನ್ನು ತಿಳಿಸಬೇಕಿತ್ತು. ಆಗ ಮದುವೆಯ ಕುರಿತು ಹುಡುಗ ಮತ್ತು ಆತನ ಮನೆಯವರು ಮತ್ತೊಮ್ಮೆ ಯೋಚಿಸುತ್ತಿದ್ದರು.

* ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಎಂದಷ್ಟೇ ಹೇಳಿದರೆ ಸಾಲದು. ಯಾವ ರೀತಿಯ ದೌರ್ಜನ್ಯ ಎಂದು ವಿವರಿಸಬೇಕು.

* ಯಾವ ರೀತಿಯ ಕ್ರಿಯೆ (ಮಹಿಳೆ ಹೇಳುವ ದೌರ್ಜನ್ಯ) ನಡೆದಿದೆ ಎಂದು ವಿವರಿಸದಿದ್ದರೆ, ಪತಿ ನಡೆಸಿದ ಕ್ರಿಯೆಯು ದೌರ್ಜನ್ಯ ಹೌದೊ ಅಲ್ಲವೊ ಎನ್ನುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT