ಹರ್ದೋಯಿ:ಬಿಜೆಪಿ ಆಡಳಿತದಲ್ಲಿ ಮಥುರಾ ಐತಿಹಾಸಿಕ ಅಭಿವೃದ್ಧಿ ಹೊಂದಲಿದೆ ಎಂದು ಉತ್ತರ ಪ್ರದೇಶ ವಿಧಾನಸಭೆ ಉಪ ಸ್ಪೀಕರ್ ನಿತಿನ್ ಅಗರ್ವಾಲ್ ಭಾನುವಾರ ಹೇಳಿದ್ದಾರೆ.
ಪುಣ್ಯಕ್ಷೇತ್ರಗಳನ್ನು ಬಿಜೆಪಿ ಅಲ್ಲದೇ ಬೇರೆ ಯಾರು ಅಭಿವೃದ್ಧಿಪಡಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇಲ್ಲಿಯ ಆಂಗ್ಲೋ–ವೇದಿಕ್ ಇಂಟರ್ ಕಾಲೇಜಿನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘500 ವರ್ಷಗಳಷ್ಟು ಹಳೆಯದಾದ ಅಯೋಧ್ಯೆ ಯುದ್ಧವನ್ನು ಬಿಜೆಪಿ ಗೆದ್ದಿದೆ. ಭವ್ಯವಾದ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಕಾಶಿಯನ್ನೂ ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗಿದೆ. ಮಥುರಾ ಶ್ರೀಕೃಷ್ಣನ ಭೂಮಿ. ಬಿಜೆಪಿ ಸರ್ಕಾರವು ಮಥುರಾದ ದೇವಾಯಲಗಳನ್ನು ಅಭಿವೃದ್ಧಿಪಡಿಸದೇ ಇದ್ದರೆ ಬೇರೆ ಯಾವ ಸರ್ಕಾರ ಅಭಿವೃದ್ಧಿಪಡಿಸುತ್ತದೆ’ ಎಂದು ಅವರು ಪ್ರಶ್ನಿಸಿದ್ದಾರೆ. ನಾವು ಈಗಾಗಲೇ ಎರಡು ಯುದ್ಧಗಳನ್ನು ಗೆದ್ದಿದ್ದೇವೆ. ಮೂರನೇ ಯುದ್ಧವನ್ನೂ ಗೆಲ್ಲುತ್ತೇವೆ ಎಂದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ (ಎಲ್ಲರ ಜೊತೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ) ಎಂಬ ತತ್ವದಡಿ ಬಿಜೆಪಿ ಕೆಲಸ ಮಾಡುತ್ತಿದೆ. ಆದರೆ, ಸಮಾಜವಾದಿ ಪಕ್ಷ ಭಯ ಬಿತ್ತುವ ರಾಜಕೀಯದಲ್ಲಿ ತೊಡಗಿದೆ. ಎಸ್ಪಿ ಆಡಳಿತದಲ್ಲಿಯೇ ಮುಜಫ್ಫರ್ನಗರ ಗಲಭೆ ನಡೆದಿದ್ದು ಎಂದು ಹೇಳಿದರು.