ನವದೆಹಲಿ: ಕೋವಿಡ್–19 ಬಿಕ್ಕಟ್ಟಿನ ನಂತರ ಲಡಾಖ್ನಲ್ಲಿ ವಿಧ್ಯುಕ್ತವಾಗಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸಲು ನಿರ್ಧರಿಸಿರುವ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಈ ವಲಯದ ಪ್ರವಾಸಿ ತಾಣಗಳನ್ನು ಪ್ರದರ್ಶಿಸುವ ಸಲುವಾಗಿ ಬೃಹತ್ ಕಾರ್ಯಕ್ರಮವನ್ನು ರೂಪಿಸುತ್ತಿದೆ.
ಆ.26ರಿಂದ 28 ರವರೆಗೆ ಮೂರು ದಿನಗಳ ಕಾಲ ಲೇಹ್ನಲ್ಲಿ ಆಯೋಜಿಸಿರುವ ಬೃಹತ್ ಕಾರ್ಯಕ್ರಮ ‘ಲಡಾಖ್: ಹೊಸ ಆರಂಭ, ಹೊಸ ಗುರಿಗಳು‘ ಕುರಿತು ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ರಾಧಾಕೃಷ್ಣ ಮಾಥೂರ್ ಮತ್ತು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ವಲಯಗಳ ಅಭಿವೃದ್ಧಿ ಖಾತೆ ಸಚಿವ ಜಿ. ಕೃಷ್ಣಾ ರೆಡ್ಡಿ ಮಾತನಾಡಲಿದ್ದಾರೆ.
‘ಸಾಹಸ, ಸಂಸ್ಕೃತಿ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲಡಾಖ್ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮ ಉದ್ಯಮದ ಪಾಲುದಾರರಿಗೆ ಸ್ಥಳೀಯ ವಿಶೇಷತೆಗಳನ್ನು ಒದಗಿಸುವ ಗುರಿ ಹೊಂದಿದೆ. ಜೊತೆಗೆ, ಪ್ರವಾಸ ಆಯೋಜಿಸುವವರೊಂದಿಗೆ ಅಥವಾ ಖರೀದಿದಾರರೊಂದಿಗೆ ಸಂವಹನ ನಡೆಸಲು ಉತ್ತಮ ವೇದಿಕೆ ಕಲ್ಪಿಸಲಿದೆ‘ ಎಂದು ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ವಸ್ತು ಪ್ರದರ್ಶನ, ಚರ್ಚಾ ಗೋಷ್ಠಿ, ಬಿ2ಬಿ ಸಭೆಗಳು, ತಾಂತ್ರಿಕ ಪ್ರವಾಸ, ಸಾಂಸ್ಕೃತಿಕ ಸಂಜೆ ಮೂಲಕ ಲಡಾಖ್ನಲ್ಲಿರುವ ಪ್ರವಾಸಿ ತಾಣಗಳು ಮತ್ತು ಪ್ರವಾಸಿಗರಿಗೆ ದೊರೆಯುವ ಸೌಲಭ್ಯಗಳನ್ನು ಪರಿಚಯಿಸಲಾಗುತ್ತದೆ ಎಂದು ತಿಳಿಸಲಾಗಿದೆ.