ನವದೆಹಲಿ: ಶ್ರದ್ಧಾ ವಾಲಕರ್ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಇದ್ದ ಪೊಲೀಸ್ ವಾಹನದ ಮೇಲೆ ಇಬ್ಬರು ಆಯುಧಗಳನ್ನು ಹಿಡಿದು ದಾಳಿ ನಡೆಸಿದ ಘಟನೆ ರೋಹಿಣಿ ವಿಧಿವಿಜ್ಞಾನ ಪ್ರಯೋಗಾಲಯದ ಹೊರಗೆ ಸೋಮವಾರ ಸಂಜೆ ನಡೆದಿದೆ. ಘಟನೆ ಸಂದರ್ಭದಲ್ಲಿ ಆಪ್ತಾಬ್ನನ್ನು ಸುಳ್ಳುಪತ್ತೆ ಪರೀಕ್ಷೆಗೆ ಅಲ್ಲಿಗೆ ಕೊಂಡೊಯ್ಯಲಾಗಿತ್ತು.
ದಾಳಿಕೋರರನ್ನು ಬಂಧಿಸಿ, ಅವರಿಂದ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರದ್ಧಾ ಮೃತದೇಹ ಕತ್ತರಿಸಲು ಬಳಸಿದ್ದ ಆಯುಧ ವಶಕ್ಕೆ: ಶ್ರದ್ಧಾ ವಾಲಕರ್ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಲು ಆರೋಪಿ ಆಫ್ತಾಬ್ ಅಮಿನ್ ಪೂನಾವಾಲಾ ಬಳಸಿದ್ದ ಎನ್ನಲಾದ ಆಯುಧವನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿ ದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ರದ್ಧಾ ಅವರ ಉಂಗುರವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಉಂಗುರವನ್ನು ಪೂನಾವಾಲಾ ಮತ್ತೊಬ್ಬ ಮಹಿಳೆಗೆ ನೀಡಿದ್ದ ಎನ್ನಲಾಗಿದೆ ಎಂದು ತಿಳಿಸಿದ್ದಾರೆ.
ಪೂನಾವಾಲಾ ತನ್ನ ಸಹಜೀವನ ಸಂಗಾತಿ ಶ್ರದ್ಧಾಳನ್ನು ಹತ್ಯೆ ಮಾಡಿ, ಆಕೆಯ ಮೃತದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ. ಬಳಿಕ ಅವುಗಳನ್ನು ಫ್ರಿಜ್ನಲ್ಲಿಟ್ಟು ಹಲವು ದಿನಗಳ ಕಾಲ ನಗರದ ವಿವಿಧ ಭಾಗಗಳಲ್ಲಿ ಎಸೆದಿದ್ದ. ಪ್ರಕರಣ ಸಂಬಂಧ ಈತನನ್ನು ನ.12ರಂದು ಬಂಧಿಸಲಾಗಿದೆ.