ಪಣಜಿ: ಮಹದಾಯಿ ನದಿ ಜಲಾನಯನ ಪ್ರದೇಶದಿಂದ ನೀರನ್ನು ಬೇರೆಡೆಗೆ ತಿರುಗಿಸುವ ಕರ್ನಾಟಕದ ಯೋಜನೆಯನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲು ಗೋವಾದ ವಿವಿಧ ಸಂಘಟನೆಗಳು ತೀರ್ಮಾನಿಸಿವೆ.
ಇದರ ಅಂಗವಾಗಿ ಭಾನುವಾರ ರಾತ್ರಿ 7.30ಕ್ಕೆ ಮಣ್ಣಿನ ಹಣತೆಗಳನ್ನು ಬೆಳಗಿಸುವಂತೆ ‘ಸೇವ್ ಮಹದಾಯಿ, ಸೇವ್ ಗೋವಾ ಫ್ರಂಟ್’ ಆಶ್ರಯದಲ್ಲಿ, ಸ್ವಯಂ ಸೇವಾ ಸಂಸ್ಥೆಗಳು (ಎನ್ಜಿಒ) ಜನರಲ್ಲಿ ಮನವಿ ಮಾಡಿವೆ.
ಮಹದಾಯಿ ವಿಚಾರವಾಗಿ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಪ್ರಜಾಲ್ ಸಖರ್ದಂಡೆ ಹೇಳಿದ್ದಾರೆ.
ಮಣ್ಣಿನ ಹಣತೆಗಳನ್ನು ಬೆಳಗುವ ಕಾರ್ಯಕ್ರಮದಲ್ಲಿ ಎಲ್ಲಾ 40 ಶಾಸಕರು ಪಾಲ್ಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹೃದಯನಾಥ ಶಿರೋಡ್ಕರ್ ಆಗ್ರಹಿಸಿದ್ದಾರೆ.
ನದಿ ನೀರು ವಿಚಾರವಾಗಿ ಕರ್ನಾಟಕವು ಒಪ್ಪಂದಗಳನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಮುಂದುವರಿಯುತ್ತಿದೆ ಎಂದು ಗೋವಾ ಆರೋಪಿಸಿದೆ.