ಮುಂಬೈ: ಪುಣೆಯ ಭೂ ವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ ಖಡ್ಸೆ ಅವರನ್ನು ಬಂಧಿಸದಂತೆ ಬಾಂಬೆ ಹೈಕೋರ್ಟ್ ಒಂದು ವಾರ ಮಧ್ಯಂತರ ರಕ್ಷಣೆ ನೀಡಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಡಬ್ಲ್ಯೂ.ಸಾಂಬ್ರೆ, ಜಾಮೀನು ಪಡೆಯಲು ವಿಶೇಷ ಪಿಎಂಎಲ್ಎ (ಅಕ್ರಮ ಹಣ ತಡೆ ಕಾಯ್ದೆ) ನ್ಯಾಯಾಲಯವನ್ನು ಸಂಪರ್ಕಿಸುವಂತೆ ಖಡ್ಸೆಗೆ ನಿರ್ದೇಶನ ನೀಡಿತು.
‘ಅರ್ಜಿದಾರರು ಒಂದು ವಾರದಲ್ಲಿ ಜಾಮೀನು ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಒಂದು ವಾರದವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳುವುದಿಲ್ಲ. ವಿಶೇಷ ನ್ಯಾಯಾಲಯವು ತ್ವರಿತವಾಗಿ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ’ ಎಂದು ನ್ಯಾಯಮೂರ್ತಿ ಸಾಂಬ್ರೆ ಹೇಳಿದರು.