ರಾಂಚಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ವೀರೇಂದ್ರ ಕುಮಾರ್ ರಾಮ್ ಅವರನ್ನು ಜಾರ್ಖಂಡ್ ಸರ್ಕಾರ ಅಮಾನತುಗೊಳಿಸಿದೆ.
ಕೆಲವು ಯೋಜನೆಗಳ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರುವರಿ 23 ರಂದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ವಿಶೇಷ ನ್ಯಾಯಾಲಯವು ರಾಮ್ ಅವರನ್ನು ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ಒಪ್ಪಿಸಿದೆ.
’ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ರಾಮ್ ಅವರನ್ನು ಜಾರ್ಖಂಡ್ ಸರ್ಕಾರಿ ಸೇವಕ ನಿಯಮಗಳು-2016ರ ಅಡಿಯಲ್ಲಿ ಬಂಧಿಸಿದ ದಿನಾಂಕದಿಂದ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ’ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ತನಿಖಾ ಸಂಸ್ಥೆಯು ಜಾರ್ಖಂಡ್, ಬಿಹಾರ ಹಾಗೂ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಫೆಬ್ರುವರಿ 21 ರಂದು ಶೋಧ ನಡೆಸಿತ್ತು. ಈ ಸಂಬಂಧ ಸುದೀರ್ಘ ವಿಚಾರಣೆ ಬಳಿಕ ರಾಮ್ ಅವರನ್ನು ಇ.ಡಿ ವಶಕ್ಕೆ ಪಡೆದಿತ್ತು.
ರಾಮ್ ಅವರು ಇ.ಡಿ ತನಿಖೆಗೆ ಸಹಕರಿಸದೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂದು ಎಂದು ಅಧಿಕೃತ ಮೂಲಗಳು ತಿಳಿಸಿವೆ.