ಚಂಡೀಗಡ: ಪಂಜಾಬಿ ಜನಪ್ರಿಯ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಬೆನ್ನಲ್ಲೇ 424 ಗಣ್ಯರಿಂದ ಹಿಂಪಡೆದಿದ್ದ ಪೊಲೀಸ್ ಭದ್ರತೆಯನ್ನು ಪುನಃಸ್ಥಾಪಿಸುವುದಾಗಿ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ಗೆ ಪಂಜಾಬ್ ಸರ್ಕಾರ ಗುರುವಾರ ಭರವಸೆ ನೀಡಿದೆ.
ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದ ಭದ್ರತೆಯನ್ನು ಜೂನ್ 7ರಿಂದ ಪುನಃಸ್ಥಾಪಿಸುವುದಾಗಿ ಪಂಜಾಬ್ ಸರ್ಕಾರ ತಿಳಿಸಿರುವುದಾಗಿ ಸುದ್ದಿಸಂಸ್ಥೆ 'ಎಎನ್ಐ' ವರದಿ ಮಾಡಿದೆ.
ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರವು ಮೂಸೆವಾಲಾ ಸೇರಿದಂತೆ 424 ಗಣ್ಯರಿಗೆ ಒದಗಿಸಿದ್ದ ಭದ್ರತೆಯನ್ನು ಹಿಂಪಡೆದಿತ್ತು. ಇದಾದ ಬೆನ್ನಲ್ಲೇ ದುಷ್ಕರ್ಮಿಗಳ ಗುಂಡೇಟಿನಿಂದ ಕಾಂಗ್ರೆಸ್ ನಾಯಕ, ಪಂಜಾಬಿ ಗಾಯಕ ಮೂಸೆವಾಲಾ ಹತ್ಯೆಗೀಡಾಗಿದ್ದರು.
ಮೂಸೆವಾಲಾ ಅವರಿಗೆ ಬೆದರಿಕೆ ಇದ್ದರೂ ಭದ್ರತೆ ವಾಪಸ್ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ.