ಶೀಘ್ರದಲ್ಲೇ ಗೋಲ್ಡಿ ಬ್ರಾರ್ ಪಂಜಾಬ್ ಪೊಲೀಸರ ವಶಕ್ಕೆ: ಭಗವಂತ ಮಾನ್

ಅಹಮದಾಬಾದ್: ಅಮೆರಿಕದಲ್ಲಿ ಬಂಧಿತ, ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಮುಖ್ಯ ಸಂಚುಕೋರ ಗೋಲ್ಡಿ ಬ್ರಾರ್ ಅವರನ್ನು ಶೀಘ್ರದಲ್ಲೇ ಪಂಜಾಬ್ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಯನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲಾಗುವುದು. ಗೋಲ್ಡಿ ಬ್ರಾರ್ ಬಂಧಿಸಿರುವ ಕ್ಯಾಲಿಫೋರ್ನಿಯಾದ ಪೊಲೀಸರು, ಭಾರತ ಸರ್ಕಾರ ಹಾಗೂ ಪಂಜಾಬ್ ಸರ್ಕಾರವನ್ನು ಸಂಪರ್ಕಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಶ್ರದ್ಧಾ ಹತ್ಯೆ ಪ್ರಕರಣ: ನಾರ್ಕೋ ಪರೀಕ್ಷೆ ಯಶಸ್ವಿ, ಆಫ್ತಾಬ್ ತಪ್ಪೊಪ್ಪಿಗೆ
ಕ್ಯಾಲಿಫೋರ್ನಿಯಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿರುವುದನ್ನು ಭಾರತ ಸರ್ಕಾರ ಮತ್ತು ಪಂಜಾಬ್ ಪೊಲೀಸರನ್ನು ಸಂಪರ್ಕಿಸಿ ಖಚಿತಪಡಿಸಿದ್ದಾರೆ. ಆರೋಪಿಯ ಹಸ್ತಾಂತರದ ಬಗ್ಗೆಯೂ ವಿಚಾರಿಸಿದ್ದಾರೆ ಎಂದು ಮಾನ್ ತಿಳಿಸಿದರು.
ಅಮೆರಿಕದೊಂದಿಗಿನ ಒಪ್ಪಂದದ ಪ್ರಕಾರ ನಾವು ಖಂಡಿತವಾಗಿಯೂ ಗೋಲ್ಡಿ ಬ್ರಾರ್ ಅವರನ್ನು ವಶಕ್ಕೆ ಪಡೆಯಲಿದ್ದೇವೆ. ಪಾಕಿಸ್ತಾನದ ಮೂಲಕ ಗ್ಯಾಂಗ್ ಬಳಸಿ ಬ್ರಾರ್ ಅಪರಾಧ ಕೃತ್ಯ ಎಸಗುತ್ತಿದ್ದರು. ಈ ನಿಟ್ಟಿನಲ್ಲಿ ಇತರೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಗೋಲ್ಡಿ ಬ್ರಾರ್ ಕ್ಯಾಲಿಫೋರ್ನಿಯಾದಲ್ಲಿ ವಶಕ್ಕೆ
ಜನಪ್ರಿಯ ಗಾಯಕ ಸಿಧು ಮೂಸೆವಾಲಾ ಅವರನ್ನು ಮೇ 29ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯ ಬ್ರಾರ್, ಸಿಧು ಹತ್ಯೆಯ ಹೊಣೆ ಹೊತ್ತುಕೊಂಡಿದ್ದನು. ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಬ್ರಾರ್ ಬಂಧನಕ್ಕೆ ಅನುವು ಮಾಡಿಕೊಡುವ 'ರೆಡ್ ಕಾರ್ನರ್' ನೋಟಿಸ್ ಹೊರಡಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.