ಲಖನೌ: ‘ಉತ್ತರ ಪ್ರದೇಶದ 1,243 ಗ್ರಾಮಗಳಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನರು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನರಿಗೆ ನೆರವು ಒದಗಿಸಲು ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸರಾಸರಿ 13.1 ಮಿ.ಮೀ ಮಳೆ ಸುರಿದಿದೆ. ಇದು ಸಾಮಾನ್ಯಕ್ಕಿಂತ ಶೇಕಡ 154 ರಷ್ಟು ಹೆಚ್ಚು.
‘ಕಳೆದ 24 ಗಂಟೆಗಳಲ್ಲಿ ಪ್ರಯಾಗರಾಜ್, ಚಿತ್ರಕೂಟ, ಕೌಶಂಬಿ, ಪ್ರತಾಪಗಡ, ಬಸ್ತಿ, ಗೊಂಡಾ, ಸುಲ್ತಾನಪುರ, ಶ್ರವಸ್ತಿ, ಲಖನೌ, ರಾಯಬರೇಲಿ ಮತ್ತು ಫತೇಪುರದಲ್ಲಿ 25 ಮಿ.ಮೀಗೂ ಹೆಚ್ಚು ಮಳೆಯಾಗಿದೆ’ ಎಂದು ಅವರು ಮಾಹಿತಿ ನೀಡಿದರು.
23 ಜಿಲ್ಲೆಗಳ 1,243 ಗ್ರಾಮಗಳ 5,46,049 ಜನರು ಪ್ರವಾಹದಿಂದಾಗಿ ಸಂಕಷ್ಟ ಸಿಲುಕಿದ್ದಾರೆ ಎಂದು ಪರಿಹಾರ ಆಯುಕ್ತರ ಕಚೇರಿಯ ವರದಿ ಹೇಳಿದೆ.
ಬದೌನ್, ಪ್ರಯಾಗರಾಜ್, ಮಿರ್ಜಾಪುರ, ವಾರಾಣಸಿ, ಗಾಜಿಪುರ ಮತ್ತು ಬಲ್ಲಿಯಾದಲ್ಲಿ ಗಂಗಾನದಿ ಹಾಗೂ ಔರೆಯಾ, ಜಲಾನ್, ಹಮೀರ್ಪುರ, ಬಾಂದಾ ಮತ್ತು ಪ್ರಯಾಗರಾಜ್ನಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಈಗಾಗಾಲೇ ಪರಿಹಾರ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, 20,768 ಪಡಿತರ ಕಿಟ್ಗಳು ಮತ್ತು 1,67,213 ಪ್ಯಾಕೆಟ್ಗಳನ್ನು ಪ್ರವಾಹ ಪೀಡಿತರಿಗೆ ವಿತರಿಸಲಾಗಿದೆ.