ಭೋಪಾಲ್: 23 ವರ್ಷಗಳ ಹಿಂದೆ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿ, ಅಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ 57 ವರ್ಷದ ವ್ಯಕ್ತಿಯೊಬ್ಬರು ಭಾರತಕ್ಕೆ ಮರಳಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸಾಗರ್ ಜಿಲ್ಲೆಯ ಘೋಶಿ ಪಟ್ಟಿ ಗ್ರಾಮದ ಪ್ರಹ್ಲಾದ್ ಸಿಂಗ್ ರಜಪೂತ್ ಅವರನ್ನು ಪಾಕಿಸ್ತಾನದ ಅಧಿಕಾರಿಗಳು ಪಂಜಾಬ್ನ ವಾಘಾ ಗಡಿಯ ಮೂಲಕ ಭಾರತದ ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಿದರು ಎಂದೂ ಹೇಳಿದ್ದಾರೆ.
1998 ರಿಂದ ಪ್ರಹ್ಲಾದ್ ಸಿಂಗ್ ನಾಪತ್ತೆಯಾಗಿದ್ದರು. ಅವರು ಹೇಗೆ ಗಡಿ ದಾಟಿ ಪಾಕಿಸ್ತಾನ ತಲುಪಿದರು ಎಂಬುದು ತಿಳಿದಿಲ್ಲ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಪ್ರಹ್ಲಾದ್ ಅವರನ್ನು ಮೊದಲಿಗೆ ಪಾಕ್ ಆಕ್ರಮಿತ ಕಾಶ್ಮೀರದ ಜೈಲಿನಲ್ಲಿರಿಸಲಾಗಿತ್ತು ಅನಂತರ ರಾವಲ್ಪಿಂಡಿ ಜೈಲಿಗೆ ಸ್ಥಳಾಂತರಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.