ಭೋಪಾಲ್: ಮಧ್ಯಪ್ರದೇಶದ ಚಂಬಲ್ ಪ್ರಾಂತ್ಯದ ಕೆಲ ಡಕಾಯಿತರ ಜೀವನ ಕಥೆಗಳನ್ನು ಮತ್ತು ಡಕಾಯಿತಿಗಳನ್ನು ನಿಯಂತ್ರಿಸಲು ಪೊಲೀಸರು ಕೈಗೊಂಡ ಕ್ರಮಗಳನ್ನು ಬಿಂಬಿಸುವ ಮ್ಯೂಸಿಯಂವೊಂದು ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದರು.
‘ಡಕಾಯಿತರ ರಾಣಿ ಮತ್ತು ಮಾಜಿ ಸಂಸದೆ ಪೂಲನ್ ದೇವಿ, ಡಕಾಯಿತ ಮಲ್ಖಾನ್ ಸಿಂಗ್, ಡಕಾಯಿತನಾಗಿ ಪರಿವರ್ತನೆಯಾದ ಕ್ರೀಡಾಪಟು ಪಾನ್ ಸಿಂಗ್ ಥೋಮರ್ ಅವರ ಜೀವನ ಕಥೆಗಳನ್ನು ಮ್ಯೂಸಿಯಂನಲ್ಲಿ ಬಣ್ಣಿಸಲಾಗುತ್ತದೆ’ ಎಂದು ಅವರು ಹೇಳಿದರು.
‘ಈ ವಸ್ತು ಸಂಗ್ರಾಹಲಯದ ಸ್ಥಾಪನೆಗಾಗಿ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿ ದೇಣಿಗೆಯನ್ನು ನೀಡಿದ್ದಾರೆ. ಈ ವಸ್ತು ಸಂಗ್ರಾಹಲಯವನ್ನುಮುಂದಿನ ತಿಂಗಳು ತೆರೆಯುವ ಸಾಧ್ಯತೆಯಿದೆ’ ಎಂದು ಭೀಂಡ್ ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ಸಿಂಗ್ ಅವರು ಮಾಹಿತಿ ನೀಡಿದರು.
‘ಈವರೆಗೆ ಕೇವಲ ಡಕಾಯಿತರ ಜೀವನ ಕಥೆಗಳನ್ನು ಮಾತ್ರ ವೈಭವೀಕರಿಸಲಾಗಿದೆ.ಆದರೆ ನಾವು ಈ ವಸ್ತು ಸಂಗ್ರಹಾಲಯದ ಮೂಲಕ ದರೋಡೆಕೋರರ ವಿರುದ್ದ ಹೋರಾಡಿದ ಪೊಲೀಸರು ಮತ್ತು ಸಂತ್ರಸ್ತರ ಕಥೆಗಳನ್ನೂ ಹೇಳಲಿದ್ಧೇವೆ’ ಎಂದು ಅವರು ಹೇಳಿದರು.
‘ಈ ಮೂಲಕ ಹಿಂಸಾಚಾರದಿಂದ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಹೇಳಲು ಬಯಸುತ್ತೇವೆ. ಈ ಸಂಗ್ರಹಾಲಯದಲ್ಲಿ ದರೋಡೆಕೋರರ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣ ಕಳೆದುಕೊಂಡ 40 ಕ್ಕೂ ಹೆಚ್ಚು ಪೊಲೀಸರು ಮತ್ತು ಅಧಿಕಾರಿಗಳ ಬಗೆಗಿನ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅಲ್ಲದೆ ಅವರ ಫೋಟೋ ಮತ್ತು ಪ್ರಶಸ್ತಿಗಳನ್ನು ಕೂಡ ಇಲ್ಲಿ ಪ್ರದರ್ಶಿಸಲಾಗುವುದು ಎಂದು ಚಂಬಲ್ನ ವರಿಷ್ಠ ಪೊಲೀಸ್ ಅಧಿಕಾರಿ ರಾಜೇಶ್ ಹಿಂಗಂಕರ್ ತಿಳಿಸಿದರು.