ಭೋಪಾಲ: ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ದೇವರಿ ಖವಾಸ ಗ್ರಾಮದಲ್ಲಿ 2021ನೇ ವರ್ಷದಲ್ಲಿ ಕೋವಿಡ್ನಿಂದಾಗಿ ಒಂದೇ ಒಂದು ಸಾವು ಸಂಭವಿಸಿಲ್ಲ. ಇದರಿಂದ ಹರ್ಷಗೊಂಡಿರುವ ಗ್ರಾಮಸ್ಥರು ದೇವರಿಗೆ ಹರಕೆ ಸಲ್ಲಿಸುವುದರ ಭಾಗವಾಗಿ ಸಾಮೂಹಿಕ ಕೇಶಮುಂಡನ ಮಾಡಿಸಿದ್ದಾರೆ.
ಶುಕ್ರವಾರ ಪುರಾತನ ದೇವನಾರಾಯಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ 90ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ತಲೆ ಬೋಳಿಸುವ ಮೂಲಕ ಹರಕೆ ಸಲ್ಲಿಸಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗ ಅತಿ ಭೀಕರವಾಗಿ ಹರಡಿದ್ದ ಸಂದರ್ಭದಲ್ಲಿ ಭಯಭೀತರಾದ ಗ್ರಾಮಸ್ಥರು ಹರಕೆ ಹೊತ್ತುಕೊಂಡಿದ್ದರು. 2021ನೇ ವರ್ಷದಲ್ಲಿ ಈ ಗ್ರಾಮದಲ್ಲಿ ಯಾವುದೇ ಸಾವು ವರದಿಯಾಗಿಲ್ಲ. 25ರಿಂದ 30 ಮಂದಿಯಷ್ಟೇ ಸೋಂಕಿಗೆ ಒಳಗಾಗಿದ್ದರು. ಬಳಿಕ ಅವರೆಲ್ಲರೂ ಚೇತರಿಸಿದ್ದರು.
ಭೋಪಾಲದಿಂದ ಸುಮಾರು 400 ಕಿ.ಮೀ. ದೂರದಲ್ಲಿರುವ ನೀಮುಚ್ ಜಿಲ್ಲೆಯ ದೇವರಿ ಖವಾಸ ಗ್ರಾಮದಲ್ಲಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಮೆರವಣಿಗೆ ನಡೆಸಿದರು.
ಸುಮಾರು 2,500 ಜನಸಂಖ್ಯೆಯನ್ನು ಹೊಂದಿರುವ ನಮ್ಮ ಗ್ರಾಮದಲ್ಲಿ ಕೋವಿಡ್ನಿಂದ ಯಾವುದೇ ಸಾವು ಸಂಭವಿಸದ ಕಾರಣ ದೇವರಿಗೆ ಹರಕೆ ಸಲ್ಲಿಸಲಾಗಿದೆ ಎಂದು ಗ್ರಾಮದ ನಿವಾಸಿ ಅಮಿತ್ ಗುರ್ಜಾರ್ ತಿಳಿಸಿದ್ದಾರೆ.