ಮುಂಬೈ: ಕೆಲ ದಿನಗಳಿಂದ ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾದ ಕಾರಣ ಇಲ್ಲಿನ ಪವಾಯಿ ಕೆರೆ ಶನಿವಾರ ಉಕ್ಕಿ ಹರಿಯಿತು ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
545 ಕೋಟಿ ಲೀಟರ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಈ ಕೆರೆಯ ನೀರನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಬಿಎಂಸಿಯ ಪ್ರಕಾರ, ಪವಾಯಿ ಕೆರೆಯು ಕಳೆದ ಮಳೆಗಾಲದಲ್ಲಿ 2020ರ ಜುಲೈ 5ರಂದು ಭರ್ತಿಯಾಗಿ, ಉಕ್ಕಿ ಹರಿದಿತ್ತು.
ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲವೂ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆಯು ಭಾನುವಾರ ರೆಡ್ ಅಲರ್ಟ್ ಹಾಗೂ ಸೋಮವಾರ ಆರೆಂಜ್ ಅಲರ್ಟ್ ಘೋಷಿಸಿದೆ.