ನವದೆಹಲಿ: ದೆಹಲಿ ಹೊರವಲಯದ ಮುಂಡ್ಕಾದ ಅಗ್ನಿ ದುರಂತದಲ್ಲಿ 27 ಮಂದಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕಟ್ಟಡದ ಮಾಲೀಕನನ್ನು ಬಂಧಿಸಲಾಗಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
‘ಘಟನೆಯ ಎರಡು ದಿನಗಳ ಬಳಿಕ ಕಟ್ಟಡದ ಮಾಲೀಕ ಮನೀಶ್ ಲಾಕ್ರಾ ಎಂಬಾತನನ್ನು ಬಂಧಿಸಲಾಗಿದೆ. ಮುಂಡ್ಕಾ ಗ್ರಾಮದ ನಿವಾಸಿಯಾಗಿರುವ ಮನೀಶ್, ಅಗ್ನಿ ದುರಂತದ ಬಳಿಕ ತಲೆಮರೆಸಿಕೊಳ್ಳಲು ಹರಿಯಾಣಕ್ಕೆ ಪರಾರಿಯಾಗಿದ್ದ’ ಎಂದು ಉಪ ಪೊಲೀಸ್ ಆಯುಕ್ತ ಸಮೀರ್ ಶರ್ಮಾ ತಿಳಿಸಿದ್ದಾರೆ.
ಪತ್ತೆಯಾಗದ ಮೃತದೇಹಗಳ ಗುರುತು: ಅಗ್ನಿ ದುರಂತದಲ್ಲಿ ತೀವ್ರವಾಗಿ ಸುಟ್ಟು ಕರಕಲಾಗಿರುವ 19 ಮಂದಿಯ ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತದೇಹಗಳನ್ನು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿರಿಸಲಾಗಿದ್ದು, ಡಿಎನ್ಎ ಪರೀಕ್ಷೆಯ ವರದಿಗಾಗಿ ಮೃತರ ಸಂಬಂಧಿಕರು ಕಾಯುತ್ತಿದ್ದಾರೆ.