ಲಖನೌ: ಉತ್ತರ ಪ್ರದೇಶದ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಲಖನೌ ವಿಶ್ವವಿದ್ಯಾನಿಲಯದ (ಎಲ್ಸಿ) ಸ್ನಾತಕೋತ್ತರ ಪದವಿಯ (ಎಂಎ) ಸಂಸ್ಕೃತ ವಿಷಯದಲ್ಲಿ ಐದು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ.
ಲಖನೌ ವಿಶ್ವವಿದ್ಯಾನಿಲಯದ (ಎಲ್ಸಿ) ವಿದ್ಯಾರ್ಥಿನಿ ಗಜಲ ಅವರಿಗೆ ಪ್ರೊ. ಶಶಿ ಶುಕ್ಲಾ ಪದಕಗಳನ್ನು ಪ್ರದಾನ ಮಾಡಿದರು.
ಕಳೆದ ವರ್ಷ ನವೆಂಬರ್ನಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಈ ಕುರಿತು ಘೋಷಣೆ ಮಾಡಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಎಲ್ಲ ವಿದ್ಯಾರ್ಥಿಗಳಿಗೆ ಪದಕ ನೀಡಲು ಸಾಧ್ಯವಾಗಿರಲಿಲ್ಲ.
ದಿನಗೂಲಿ ಕಾರ್ಮಿಕನ ಮಗಳಾಗಿರುವ ಗಜಲ, ಐದು ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ, ಉರ್ದು, ಅರೇಬಿಕ್ ಮತ್ತು ಸಂಸ್ಕೃತ) ಪ್ರವೀಣೆಯಾಗಿದ್ದಾಳೆ.
10ನೇ ತರಗತಿಯಲ್ಲಿದ್ದಾಗ ಆಕೆಯ ತಂದೆ ನಿಧನರಾದರು. ಬಳಿಕ ಶಿಕ್ಷಣ ಮುಂದುವರಿಸಲು ತೊಂದರೆ ಎದುರಾಗಿತ್ತು. ಆದರೆ ಇಬ್ಬರು ಸಹೋದರರ ಬೆಂಬಲದಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಯಿತು.
'ಈ ಪದಕಗಳನ್ನು ನನ್ನಿಂದಾಗಿ ಅಲ್ಲ, ನನ್ನ ಸಹೋದರಾದ ಶದಾಬ್ ಹಾಗೂ ನಬಾವ್ ಅವರಿಂದಾಗಿ ಗಳಿಸಲು ಸಾಧ್ಯವಾಗಿದೆ. ಅವರಿಬ್ಬರು ಸಣ್ಣ ವಯಸ್ಸಿನಲ್ಲಿಯೇ ಗ್ಯಾರೇಜ್ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇದರಿಂದಾಗಿ ನನಗೆ ಅಧ್ಯಯನ ಮುಂದುವರಿಸಲು ಸಾಧ್ಯವಾಯಿತು' ಎಂದು ಹೇಳಿದ್ದಾರೆ.
ಗಜಲಗೆ ತಾಯಿ ನಸ್ರೀನ್ ಬಾನು ಹಾಗೂ ಸಹೋದರಿ ಯಾಸ್ಮೀನ್ ಕೂಡಾ ಇದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಸಂಸ್ಕೃತ ಪ್ರಾಧ್ಯಾಪಕಿಯಾಗುವ ಗುರಿ ಹೊಂದಿದ್ದಾರೆ.
ಸಂಸ್ಕೃತ ವಿಷಯವನ್ನು ಏಕೆ ಆರಿಸಿದ್ದೀರಿ ಎಂದು ಕೇಳಿದಾಗ, 'ದೇವರ ಸ್ವಂತ ಭಾಷೆಯಾಗಿರುವ ಸಂಸ್ಕೃತ ಎಲ್ಲ ಭಾಷೆಗಳಿಗೆ ತಾಯಿ. ಇದು ದೈವಿಕವಾಗಿದ್ದು, ಸಾಹಿತ್ಯವಾಗಿದೆ. ಸಂಸ್ಕೃತ ಕಾವ್ಯವು ಹೆಚ್ಚು ಮಧುರವಾಗಿದೆ' ಎಂದು ಹೇಳಿದ್ದಾರೆ.