ಮುಂಬೈ/ ಲಖನೌ: ಪ್ರವಾದಿ ಮಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದರ ವಿರುದ್ಧ ಪ್ರತಿಭಟನೆಗಳನ್ನು ನಡೆಸುವ ಯೋಜನೆ ಕೈಬಿಡುವಂತೆ ಪ್ರಮುಖ ಮುಸ್ಲಿಂ ಸಂಘಟನೆಗಳು ಹಾಗೂ ಮಸೀದಿಗಳ ಆಡಳಿತ ಮಂಡಳಿಗಳು ತಮ್ಮ ಅನುಯಾಯಿಗಳಿಗೆ ಮನವಿ ಮಾಡಿವೆ.
ಕಳೆದ ವಾರ ನಡೆದಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಮುಸ್ಲಿಂ ಯುವಕರು ಮೃತಪಟ್ಟಿದ್ದರು. ಪೊಲೀಸರೂ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ದೇಶದಾದ್ಯಂತ400ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನು ಕೈಬಿಡುವಂತೆ ಮನವಿ ಮಾಡಲಾಗಿದೆ ಎನ್ನಲಾಗಿದೆ.
‘ಯಾರಾದರೂ ಇಸ್ಲಾಂ ಧರ್ಮವನ್ನು ಕೀಳಾಗಿಸಿದರೆ ಒಟ್ಟಾಗಿ ನಿಲ್ಲಬೇಕಾದ್ದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯ. ಆದರೆ, ಇದರ ಜತೆಗೆ ಶಾಂತಿ ಕಾಪಾಡಬೇಕಾದದ್ದೂ ಮುಖ್ಯವಾದ ವಿಚಾರ’ ಎಂದು ಜಮಾತ್–ಎ–ಇಸ್ಲಾಮಿ ಹಿಂದ್ನ ಸದಸ್ಯ ಮಲಿಕ್ ಅಸ್ಲಾಂ ಹೇಳಿದ್ದಾರೆ.
ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರು ಕಳೆದ ತಿಂಗಳು ಪ್ರವಾದಿ ಮಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ಹೇಳಿಕೆ ಪ್ರತಿಭಟಿಸಿ ದೇಶದಾದ್ಯಂತ ಪ್ರತಿಭಟನೆ ನಡೆದಿದ್ದು, ಹಲವೆಡೆ ಹಿಂಸಾಚಾರಕ್ಕೆ ತಿರುಗಿತ್ತು.