ಮುಜಾಫರ್ನಗರ, ಉತ್ತರ ಪ್ರದೇಶ (ಪಿಟಿಐ): ಇಲ್ಲಿ 2013ರಲ್ಲಿ ನಡೆದಿದ್ದ ಗಲಭೆ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಿಜೆಪಿ ಶಾಸಕ ವಿಕ್ರಂ ಸೈನಿ ಮತ್ತು ಇತರ 11 ಮಂದಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ವಿಶೇಷ ನ್ಯಾಯಾಧೀಶ ಗೋಪಾಲ್ ಉಪಾಧ್ಯಾಯ ಅವರು ಆರೋಪಿಗಳಿಗೆ ತಲಾ ₹10 ಸಾವಿರ ದಂಡವನ್ನೂ ವಿಧಿಸಿದ್ದಾರೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ 15 ಮಂದಿಯನ್ನು ನ್ಯಾಯಪೀಠವು ಆರೋಪಮುಕ್ತಗೊಳಿಸಿದೆ.
ಉತ್ತರಪ್ರದೇಶದ ಖತೌಲಿ ಕ್ಷೇತ್ರದ ಶಾಸಕರಾಗಿರುವ ವಿಕ್ರಂ ಹಾಗೂ ಇತರರನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.