ಚಂಡೀಗಡ: ಚರಣ್ಜಿತ್ ಸಿಂಗ್ ಚನ್ನಿ ನೇತೃತ್ವದ ಸರ್ಕಾರಕ್ಕೆ ಪಂಜಾಬ್ ಕಾಂಗ್ರೆಸ್ನ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಧು ಅವರು ಹೊಸ ಬೆದರಿಕೆ ಒಡ್ಡಿದ್ದಾರೆ.
ಡ್ರಗ್ಸ್ ದಂಧೆ ಮತ್ತು ಹತ್ಯೆಗಳ ಕುರಿತಾದ ವರದಿಗಳನ್ನು ಸರ್ಕಾರವು ಬಹಿರಂಗಗೊಳಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸಿಧು ತಿಳಿಸಿದ್ದಾರೆ.
ಡ್ರಗ್ಸ್ ದಂಧೆಯ ಕುರಿತಾದ ವರದಿಗಳನ್ನು ಹೈಕೋರ್ಟ್ನಲ್ಲಿ ಸಲ್ಲಿಸಲಾಗಿದೆ. ಪಂಜಾಬ್ ಸರ್ಕಾರವು ಈ ವರದಿಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಕೆಂದು ಸಿಧು ಒತ್ತಾಯಿಸಿದ್ದಾರೆ.
ಡ್ರಗ್ಸ್ ದಂಧೆಯನ್ನು ನಿರ್ಮೂಲನೆ ಮಾಡುವ ಭರವಸೆ ನೀಡಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದೆ. ಆ ಕಾರಣ, ವರದಿಗಳನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಸಿಧು ಹೇಳಿದ್ದಾರೆ.
ಒಂದು ವೇಳೆ ಸರ್ಕಾರವು ತಮ್ಮ ಮನವಿಗೆ ಸ್ಪಂದಿಸದೇ ಹೋದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕೂರುವುದಾಗಿ ಅವರು ಬೆದರಿಕೆ ಹಾಕಿದ್ದಾರೆ.
ಚನ್ನಿ ಅವರನ್ನು ಪಂಜಾಬ್ನ ನೂತನ ಮುಖ್ಯಮಂತ್ರಿಯಾಗಿ ನೇಮಕ ಮಾಡಿದ ಬಳಿಕ ಪಕ್ಷದ ನಿರ್ಧಾರಗಳ ವಿರುದ್ಧ ಬಂಡೆದ್ದಿದ್ದ ಸಿಧು ಇತ್ತೀಚೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅದನ್ನು ಹೈಕಮಾಂಡ್ ಅಂಗೀಕರಿಸಿರಲಿಲ್ಲ.
ಪಂಜಾಬ್ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ, ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ ಇನ್ನಷ್ಟು ಬಲಪಡಿಸುವಂತೆ ಸಿಧು ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತ್ತು.