ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ದುರಾಡಳಿತವು ದೇಶದ ಸಾಮಾಜಿಕ ಚೌಕಟ್ಟಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಶರದ್ ಪವಾರ್ ನೇತೃತ್ವದಎನ್ಸಿಪಿ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಗುರುವಾರ ಮಾತನಾಡಿದ ಎನ್ಸಿಪಿ ವಕ್ತಾರ ಮಹೇಶ್ ಭಾರತ್ ತಪಾಸೆ ಅವರು, ‘ಆರ್ಎಸ್ಎಸ್ ಸಿದ್ಧಾಂತವು ದೇಶದಲ್ಲಿನ ಕೋಮು ಸೌಹಾರ್ದವನ್ನು ಹಾಳುಗೆಡವಿದೆ. ಧರ್ಮ ಮತ್ತು ಜನಾಂಗೀಯತೆಯು ಸಮಾನತೆ ಮತ್ತು ವಿಜ್ಞಾನದ ಮೇಲೆ ಸವಾರಿ ನಡೆಸುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 8 ವರ್ಷಗಳ ನರೇಂದ್ರ ಮೋದಿ ಅವರ ದುರಾಡಳಿತದಿಂದ ದೇಶವು ಸಾಕಷ್ಟು ಕಳೆದುಕೊಂಡಿದೆ ಎಂದುಆರೋಪಿಸಿದ ಅವರು, ದೇಶವು ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ಪ್ರಜಾಪ್ರಭುತ್ವವನ್ನು ದಮನ ಮಾಡಲಾಗುತ್ತಿದೆ. ದ್ವೇಷ ರಾಜಕೀಯವನ್ನು ಉತ್ತೇಜಿಸಲಾಗುತ್ತಿದೆ.
ರಾಷ್ಟ್ರದ ಭದ್ರತೆಯನ್ನು ರಕ್ಷಿಸುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ವಿಫಲವಾಗಿದೆ. ಹಣದ ಮೌಲ್ಯ ಮತ್ತು ಆರ್ಥಿಕತೆ ಕುಸಿದಿದ್ದು, ಸಾಮಾಜಿಕ ಚೌಕಟ್ಟು ಸಹ ಕುಸಿತವಾಗುತ್ತಿದೆ ಎಂದು ಆರೋಪಿಸಿದ್ದಾರೆ.