ನವದೆಹಲಿ:ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಚಿತಾಭಸ್ಮವನ್ನು ಭಾರತಕ್ಕೆ ಮರಳಿ ತರಬೇಕು ಎಂದು ನೇತಾಜಿ ಅವರ ಪುತ್ರಿ ಅನಿತಾ ಬೋಸ್ ಸೋಮವಾರ ಆಗ್ರಹಿಸಿದ್ದಾರೆ.
ನೇತಾಜಿ ಅವರು 1945ರ ಆಗಸ್ಟ್ 18ರಂದು ಮೃತಪಟ್ಟ ಬಗ್ಗೆ ಇರುವ ಸಂಶಯಗಳಿಗೆ ಚಿತಾಭಸ್ಮದ ಡಿಎನ್ಎ ಪರೀಕ್ಷೆಯಿಂದ ಉತ್ತರ ಸಿಗಲಿದೆ ಎಂದು ಅವರು ಹೇಳಿದ್ದಾರೆ.
ಆಸ್ಟ್ರಿಯನ್ ಸಂಜಾತಜರ್ಮನಿಯಲ್ಲಿ ನೆಲೆಸಿರುವ ಅರ್ಥಶಾಸ್ತ್ರಜ್ಞರೊಬ್ಬರ ಪ್ರಕಾರ, ಟೋಕಿಯೊದ ರೆಂಕೋಜಿ ದೇವಾಲಯದಲ್ಲಿ ನೇತಾಜಿಯವರದ್ದು ಎನ್ನಲಾದ ಚಿತಾಭಸ್ಮ ಇರಿಸಲಾಗಿದೆ. ಈ ಚಿತಾಭಸ್ಮದ ಡಿಎನ್ಎ ಪರೀಕ್ಷೆಯಿಂದ ವೈಜ್ಞಾನಿಕ ಪುರಾವೆ ಪಡೆಯಲು ಸಾಧ್ಯವಿದೆ. ಈ ಪ್ರಕ್ರಿಯೆಗೆ ಜಪಾನ್ ಸರ್ಕಾರ ಅನುಮತಿಸುತ್ತದೆ.
‘ಸ್ವಾತಂತ್ರ್ಯದ ಸಂತೋಷವನ್ನು ಅನುಭವಿಸಲು ತಂದೆ ಬದುಕಲಿಲ್ಲ. ಕನಿಷ್ಠ ಅವರ ಚಿತಾಭಸ್ಮವನ್ನು ಭಾರತೀಯ ನೆಲಕ್ಕೆ ಮರಳಿಸಲು ಇದು ಸಮಯ’ ಎಂದು ನೇತಾಜಿ ಅವರ ಏಕೈಕಿ ಪುತ್ರಿ ತಿಳಿಸಿದ್ದಾರೆ.
‘ನೇತಾಜಿ ಸಾವಿನ (ನ್ಯಾಯಮೂರ್ತಿ ಮುಖರ್ಜಿ ನೇತೃತ್ವದ ತನಿಖಾ ಆಯೋಗ) ಕುರಿತು ನಡೆದ ಕೊನೆಯ ಸರ್ಕಾರಿ ತನಿಖೆಯಲ್ಲಿ ದೊರೆತ ದಾಖಲೆಗಳನ್ನು ಪರೀಕ್ಷೆಗೆ ಒಳಪಡಿಸಲು ರೆಂಕೋಜಿ ದೇವಸ್ಥಾನದ ಅರ್ಚಕರು ಮತ್ತು ಜಪಾನ್ ಸರ್ಕಾರ ಒಪ್ಪಿಗೆ ಸೂಚಿಸಿದೆ’ ಎಂದು ಅನಿತಾ ಹೇಳಿದ್ದಾರೆ.