ಶ್ರೀನಗರ: ಕಾಶ್ಮೀರದ ಉತ್ತರದಲ್ಲಿರುವ ಕುಪ್ವಾರ ಜಿಲ್ಲೆಯ ತೀತ್ವಾಲ್ ಗ್ರಾಮದಲ್ಲಿ ಕರ್ನಾಟಕದ ಶೃಂಗೇರಿಯಲ್ಲಿರುವ ಶಂಕರಾಚಾರ್ಯ ಮಠವು ದೇವಿ ಶಾರದೆಯ ನೂತನ ದೇವಾಲಯ ನಿರ್ಮಿಸಲು ಮುಂದಾಗಿದೆ.
ಗ್ರಾಮದ ಬಳಿಯ ಕಿಶನ್ಗಂಗಾ ನದಿ ತೀರದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗುತ್ತದೆ.
ಮಠವು ನೀಡುವ ಪಂಚಲೋಹದಿಂದ ಮಾಡಿದ ದೇವಿ ಶಾರದೆಯ ವಿಗ್ರಹವನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಮಠದ ಸಿಇಒ ವಿ.ಆರ್.ಗೌರಿಶಂಕರ್ ತಿಳಿಸಿದ್ದಾರೆ.
6ನೇ ಶತಮಾನದಲ್ಲಿ ಸ್ಥಾಪಿಸಲಾದ ಶಾರದಾ ದೇವಸ್ಥಾನವನ್ನು ಸರ್ವಜ್ಞ ಪೀಠ ಎಂದೂ ಕರೆಯಲಾಗುತ್ತದೆ. ಸದ್ಯ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಈ ದೇವಸ್ಥಾನವನ್ನು ಹಾಳುಗೆಡವಲಾಗಿದೆ. ಇದೇ ಮಾದರಿಯಲ್ಲಿ ನೂತನ ದೇವಸ್ಥಾನವನ್ನು ನಿರ್ಮಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.