ನವದೆಹಲಿ: ಇಟ್ಟಿಗೆ ಸುಡಲು ನಿರುಪಯುಕ್ತ ಕಾಗದ ಮತ್ತು ತ್ಯಾಜ್ಯದ ಬಳಕೆಯಿಂದ ವಾಯುಮಾಲಿನ್ಯ ಆಗುತ್ತಿರುವ ಕುರಿತು ವರದಿ ಸಲ್ಲಿಸದ ಪರಿಸರ ಸಚಿವಾಲಯವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತರಾಟೆಗೆ ತೆಗೆದುಕೊಂಡಿದೆ.
ಇಟ್ಟಿಗೆ ಸುಡಲು ದೊಡ್ಡ ಪ್ರಮಾಣದಲ್ಲಿ ನಿರುಪಯುಕ್ತ ಪ್ಲಾಸ್ಟಿಕ್ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬುದರ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಮಂಡಳಿಯ ಅಧ್ಯಕ್ಷ, ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ನೇತೃತ್ವದ ಪೀಠವು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಪರಿಣಾಮಕಾರಿ ವ್ಯವಸ್ಥೆಯ ಕೊರತೆ ಇದೆ ಎಂದು ಅಭಿಪ್ರಾಯಪಟ್ಟಿತು.
ಅಕ್ಟೋಬರ್ 14ರ ಒಳಗೆ ತನ್ನ ಪ್ರತಿಕ್ರಿಯೆ ದಾಖಲಿಸಬೇಕು ಎಂದು ಸೂಚಿಸಿದ ನ್ಯಾಯಮಂಡಳಿಯು, ಹಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿ ವರದಿಯನ್ನು ದಾಖಲಿಸಿಲ್ಲ, ಸಚಿವಾಲಯದ ಪರವಾಗಿ ಯಾರೊಬ್ಬರು ಹಾಜರಿರುವುದಿಲ್ಲ. ಮುಂದಿನ ವಿಚಾರಣೆ ವೇಳೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಜರಿರಬೇಕು ಎಂದು ಸೂಚಿಸಿತು.
ಅರ್ಜಿದಾರರಾದ ಅಮಿತ್ ಜೈನ್ ಅವರು, ಇಟ್ಟಿಗೆ ಸುಡುವ ಕಾರ್ಯಕ್ಕೆ ಅಮೆರಿಕ, ಯುರೋಪ್ ಮತ್ತು ಇತರೆಡೆಯಿಂದ ದೊಡ್ಡ ಪ್ರಮಾಣದಲ್ಲಿ ಅಗ್ಗದ ಕಾಗದ, ತ್ಯಾಜ್ಯವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ್ದರು.