ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಸಮೀಪ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈಯ ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ ಮಾನೆ ಅವರನ್ನು ರಾಷ್ಟ್ರೀಯ ತನಿಖಾ ದಳ (ಎಎನ್ಐ) ಬಂಧಿಸಿದೆ.
ಪ್ರಕರಣದಲ್ಲಿ ಮಾನೆ ಕೂಡ ಶಾಮೀಲಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊ ಪತ್ತೆ ಮತ್ತು ಉದ್ಯಮಿ ಮನ್ಸುಖ್ ಹಿರೇನ್ ಅವರ ಸಾವಿಗೆ ಸಂಬಂಧಿಸಿ ಎನ್ಐಎಯು ತನಿಖೆ ನಡೆಸುತ್ತಿದೆ. ಈವರೆಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಇದೇ ಪ್ರಕರಣದಲ್ಲಿ ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಹ ಬಂಧನದಲ್ಲಿದ್ದಾರೆ. ನಕಲಿ ಎನ್ಕೌಂಟರ್ ಮಾಡುವ ಉದ್ದೇಶದಿಂದ ಸಚಿನ್ ವಾಜೆ ಯೋಜನೆ ರೂಪಿಸಿರುವ ಸಾಧ್ಯತೆ ಇದೆ ಎಂದು ಇತ್ತೀಚೆಗೆ ಎನ್ಐಎ ಅನುಮಾನ ವ್ಯಕ್ತಪಡಿಸಿತ್ತು.