ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರ ವಿರುದ್ಧ ಮುಂಬೈ ಮತ್ತು ಥಾಣೆಯ 20 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಸೋಮವಾರ ನಡೆಸಿದ ದಾಳಿಯಲ್ಲಿ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಸೋಮವಾರ ಬೆಳಿಗ್ಗೆಯೇ ದಾಳಿ ನಡೆಸಿದ ಎನ್ಐಎ ದಕ್ಷಿಣ ಮುಂಬೈನ ಭೆಂಡಿ ಬಜಾರ್ ಪ್ರದೇಶದಲ್ಲಿ ಸಲೀಂ ನಿವಾಸದಲ್ಲಿಯೇ ಆತನನ್ನು ಬಂಧಿಸಿದೆ. ದಾವೂದ್ ಸಹಚರ ಚೋಟಾ ಶಕೀಲ್ನ ಸಹಾಯಕನಾಗಿರುವ ಸಲೀಂ ಆತನಿಗೆ ಸಂಬಂಧಿಯೂ ಆಗಿದ್ದಾನೆ’ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ದಾವೂದ್ ಇಬ್ರಾಹಿಂ ಸಹಚರರ ವಿರುದ್ಧ ಮುಂಬೈನ ನಾಗ್ಪಾಡಾ ಪ್ರದೇಶ, ಭೆಂಡಿ ಬಜಾರ್, ಸಾಂತಾಕ್ರೂಜ್, ಮಾಹಿಮ್, ಮುಂಬೈನ ಗೋರೆಗಾಂವ್ ಪ್ರದೇಶ, ಥಾಣೆಯ ಮುಂಬ್ರಾ ಮತ್ತು ಇತರ ಸ್ಥಳಗಳಲ್ಲಿರುವ ಹೌಸಿಂಗ್ ಸೊಸೈಟಿ ಮೇಲೆ ಎನ್ಐಎ ದಾಳಿ ನಡೆಸಿದೆ.
ಹಲವು ಹವಾಲಾ ಆಪರೇಟರ್ಗಳು ಮತ್ತು ಡ್ರಗ್ ಪೆಡ್ಲರ್ಗಳು ದಾವೂದ್ ಇಬ್ರಾಹಿಂ ಜೊತೆ ಸಂಬಂಧ ಹೊಂದಿದ್ದರು. ಫೆಬ್ರುವರಿಯಲ್ಲಿ ದಾವೂದ್ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಸಲೀಂ ಖುರೇಷಿಯನ್ನು ವಿಚಾರಣೆಗೆ ಒಳಪಡಿಸಿತ್ತು.