ಪಟನಾ:ಪ್ರಧಾನಿ ನರೇಂದ್ರ ಮೋದಿಯವರ ಸುಧಾರಣಾ ನೀತಿಗಳಿಂದಾಗಿಯೇ ಬಿಹಾರದಲ್ಲಿ ಎನ್ಡಿಎ ಗೆಲುವು ಸಾಧಿಸಲು ಸಾಧ್ಯವಾಯಿತು. ಆಡಳಿತ ವಿರೋಧಿ ಎಂಬ ಆರೋಪಗಳನ್ನು ತಳ್ಳಿ ಹಾಕಿ ನಿತೀಶ್ ಕುಮಾರ್ ಸರ್ಕಾರ ಅಧಿಕಾರಕ್ಕೇರಿದೆ ಎಂದು ಬಿಹಾರದ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಬುಧವಾರ ಹೇಳಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಅವರೇ ಎನ್ಡಿಎ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ.ಅದೇ ವೇಳೆ ಬಿಜೆಪಿ ಮತ್ತು ಜೆಡಿಯು ಗೆದ್ದ ಸೀಟುಗಳ ಅಂತರವು ಆಡಳಿತಾರೂಢ ಪಕ್ಷವನ್ನು ಬಾಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಆಗಲಿದ್ದಾರಾ? ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ ಶೇ.100 ನಿಜ ಎಂದು ಅವರು ಉತ್ತರಿಸಿದ್ದಾರೆ.
ನಾವು ಮಿತ್ರ ಪಕ್ಷವಾದರೂ ಸಮಾನರು. ನಾವು ಬಿಹಾರದಲ್ಲಿ ಉತ್ತಮ ಆಡಳಿತ ನಡೆಸಬೇಕಿದೆ.ನಾಲ್ಕನೇ ಬಾರಿ ಗೆಲ್ಲುವುದು ಕಷ್ಟವಾದ ಕೆಲಸ, ನಾವು ಇಲ್ಲಿ ಗೆದ್ದಿದ್ದೇವೆ. ಎಲ್ಲವೂ ಸರಿ ಇದೆ ಎಂಬುದನ್ನು ಇದು ತೋರಿಸುತ್ತದೆ. ಸತತವಾಗಿ ನಾಲ್ಕನೇ ಬಾರಿ ಗೆಲ್ಲುವುದು ಬಲು ಅಪರೂಪ ಎಂದಿದ್ದಾರೆ ಜೈಸ್ವಾಲ್ .