ಮುಂಬೈ: ‘ರಾಜಧಾನಿ ಮುಂಬೈ ಸೇರಿದಂತೆ ರಾಜ್ಯದ ಇತರೆಡೆ ತಮ್ಮ ಬೆಂಗಾವಲು ಪಡೆಗೆ ವಿಶೇಷ ಶಿಷ್ಟಾಚಾರ (ಪ್ರೋಟೊಕಾಲ್) ವ್ಯವಸ್ಥೆ ಒದಗಿಸುವ ಅಗತ್ಯವಿಲ್ಲ’ ಎಂದು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪೊಲೀಸರಿಗೆ ಶುಕ್ರವಾರ ಸೂಚನೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಜನೀಶ್ ಸೇಠ್ ಮತ್ತು ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಶಿಂಧೆ ಅವರು ಈ ನಿರ್ದೇಶನ ನೀಡಿದ್ದಾರೆ.
‘ತಮ್ಮ ಬೆಂಗಾವಲು ಪಡೆಗೆ ವಿಶೇಷ ಪೊಲೀಸ್ ಬಂದೋಬಸ್ತ್ ಕಲ್ಪಿಸುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಹಾಗಾಗಿ, ಈ ವ್ಯವಸ್ಥೆ ಬೇಡ ಎಂದು ಶಿಂಧೆ ತಿಳಿಸಿದ್ದಾರೆ’ ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಇದು ಶ್ರೀಸಾಮಾನ್ಯನ ಸರ್ಕಾರ. ಆದ್ದರಿಂದ ಅವರು ಗಣ್ಯವ್ಯಕ್ತಿಗಳಿಗಿಂತ (ವಿಐಪಿ) ಆದ್ಯತೆಯನ್ನು ಪಡೆಯಬೇಕು. ವಿಶೇಷ ಪ್ರೋಟೊಕಾಲ್ನಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ನಾಗರಿಕರ ನಿತ್ಯದ ದಿನಚರಿಗೆ ಅಡ್ಡಿಯಾಗುತ್ತದೆ. ಅಲ್ಲದೆ, ಇದು ಪೊಲೀಸ್ ಪಡೆಗೂ ಹೊರೆಯಾಗುತ್ತದೆ’ ಎಂದೂ ಶಿಂಧೆ ಹೇಳಿದ್ದಾರೆ.