ನವದೆಹಲಿ: ಮೋದಿ ಪ್ರಧಾನಿಯಾಗಿರುವವರೆಗೆ ಯಾವ ಕಾರ್ಪೊರೇಟ್ ಕಂಪನಿಯೂ ರೈತರ ಜಮೀನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಕಿಸಾನ್ಗಡ ಗ್ರಾಮದ ರೈತರನ್ನು ಉದ್ದೇಶಿಸಿ ಇಲ್ಲಿ ಮಾತನಾಡಿದ ಅವರು, ‘ನೂತನ ಕೃಷಿ ಕಾಯ್ದೆಗಳು ಜಾರಿಯಾದರೂ ಬೆಂಬಲ ಬೆಲೆ ಮುಂದುವರಿಯಲಿದ್ದು, ಮಂಡಿಗಳು ಸಹ ಕಾರ್ಯ ನಿರ್ವಹಿಸಲಿವೆ’ ಎಂದು ಹೇಳಿದರು.
‘ನೂತನ ಕೃಷಿ ಕಾಯ್ದೆಗಳು ರೈತರ ಹಿತವನ್ನು ಕಾಪಾಡುವುದಿಲ್ಲ, ಅವುಗಳು ರೈತ ವಿರೋಧಿ ಎಂಬ ಅನುಮಾನಗಳು ಇದ್ದರೆ, ಈ ಎಲ್ಲ ಸಂದೇಹಗಳ ನಿವಾರಣೆಗಾಗಿ ರೈತರೊಂದಿಗೆ ತೆರೆದ ಮನಸ್ಸಿನಿಂದ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ’ ಎಂದೂ ಹೇಳಿದರು.
‘ಬೆಂಬಲ ಬೆಲೆ ಸೇರಿದಂತೆ ನೂತನ ಕಾಯ್ದೆಗಳಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಸುಳ್ಳು ಹೇಳುತ್ತಿವೆ. ರೈತರ ಅಭಿವೃದ್ಧಿಯೇ ಮೋದಿ ನೇತೃತ್ವದ ಸರ್ಕಾರದ ಆದ್ಯತೆಯಾಗಿದೆ’ ಎಂದು ಹೇಳುವ ಮೂಲಕ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.
ಕಿಸಾನ್ ಸಮ್ಮಾನ್ ನಿಧಿಯಡಿ ರೈತರ ಕುಟುಂಬಗಳಿಗೆ ಹಣಕಾಸು ನೆರವು ನೀಡಿ, ರೈತ ಕುಟುಂಬಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಸಂವಾದ ನಡೆಸಿದ್ದನ್ನು ಶಾ ವೀಕ್ಷಿಸಿದರು.