ನವದೆಹಲಿ (ಪಿಟಿಐ): ‘ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ದೇಶದಾದ್ಯಂತ ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
‘ಆದರೆ, ಪೌರತ್ವ ಕಾಯ್ದೆ 1955ರ ಅನ್ವಯ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್ಪಿಆರ್) ಪರಿಷ್ಕರಿಸಲು ನಿರ್ಧರಿಸಲಾಗಿದೆ. ಈ ಪ್ರಕ್ರಿಯೆ 2021ರ ಜನಗಣತಿ ಜೊತೆಗೇ ನಡೆಯಲಿದೆ’ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಎನ್ಆರ್ಸಿ ಅನ್ನು ಅಸ್ಸಾಂ ರಾಜ್ಯದಲ್ಲಿ ಮಾತ್ರ ಪರಿಷ್ಕರಿಸಲಾಗುತ್ತಿದೆ. ಎನ್ಆರ್ಸಿ ಅಂತಿಮ ಪಟ್ಟಿಯನ್ನು 2019ರಲ್ಲಿ ಪ್ರಕಟಿಸಿದಾಗ 3.3 ಕೋಟಿ ಅರ್ಜಿಯಲ್ಲಿ 19.06 ಲಕ್ಷ ಅರ್ಜಿಗಳನ್ನು ಕೈಬಿಡಲಾಗಿತ್ತು. ಇದು, ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಮತ್ತೊಂದು ಪ್ರಶ್ನೆಗೆ ಸಚಿವರು, ಅಸ್ಸಾಂನಲ್ಲಿ ಎನ್ಆರ್ಸಿ ಅಂತಿಮ ಪಟ್ಟಿಗೆ ಸಂಬಂಧಿಸಿದಂತೆ ಅತೃಪ್ತಿ ಇರುವ ಯಾವುದೇ ವ್ಯಕ್ತಿ ನಿಯೋಜಿತ ವಿದೇಶಿಯರ ನ್ಯಾಯಮಂಡಳಿ ಎದುರು ಈ ಕುರಿತ ಆದೇಶ ಪ್ರಕಟವಾದ 120 ದಿನದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.