ನವದೆಹಲಿ: ‘ಎಲ್ಲ ಭಾಷೆಗಳಿಗೂ ಸಮಾನವಾದ ಗೌರವವನ್ನು ನಾವು ನೀಡಬೇಕು. ಜೊತೆಗೆ ಯಾವುದೇ ಭಾಷೆಯನ್ನು ಹೇರಬಾರದು ಹಾಗೂ ವಿರೋಧಿಸಲೂ ಬಾರದು’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ಹೇಳಿದರು.
‘ಹಿಂದಿ ದಿವಸ–2020’ರ ಆನ್ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ ಎಲ್ಲ ಭಾಷೆಗಳಿಗೂ ಅದರದೇ ಆದ ಇತಿಹಾಸವಿದೆ. ಭಾಷೆಯಲ್ಲಿರುವ ವಿವಿಧತೆ ಹಾಗೂ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಜನರೆಲ್ಲರಿಗೂ ಹೆಮ್ಮೆ ಇರಬೇಕು. ಹಿಂದಿ ಮತ್ತು ಇತರೆ ಭಾಷೆಗಳನ್ನುಪರಸ್ಪರ ಪೂರಕವಾಗಿ ನೋಡಬೇಕು’ ಎಂದರು.
‘ಹಿಂದಿಯೇತರ ಭಾಷೆ ಇರುವ ರಾಜ್ಯದ ವಿದ್ಯಾರ್ಥಿಗಳು ಹಿಂದಿಯನ್ನು ಕಲಿಯಬೇಕು. ಅದೇ ರೀತಿ ಹಿಂದಿ ಮಾತನಾಡುವ ರಾಜ್ಯದ ಜನರು ತಮಿಳು, ತೆಲುಗು, ಕನ್ನಡ ಹೀಗೆ ಯಾವುದಾದರೂ ಒಂದು ಭಾರತೀಯ ಭಾಷೆಯನ್ನು ಕಲಿಯಬೇಕು. ಇದರಿಂದಾಗಿ ಜನರ ನಡುವೆ ಪ್ರೀತಿ ಹೆಚ್ಚಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್ಇಪಿ) ಮಾತೃಭಾಷೆಗೆ ಪ್ರಾಮುಖ್ಯತೆ ನೀಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ‘ವಿಷಯವೊಂದನ್ನು ಮಕ್ಕಳು ಸಮರ್ಪಕವಾಗಿ ಅಧ್ಯಯನ ಮಾಡಲು ಹಾಗೂ ಅರ್ಥೈಸಿಕೊಳ್ಳಲು ಇದು ಸಹಕಾರಿಯಾಗಲಿದೆ’ ಎಂದರು.