ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತನಗೆ ಮತ ಹಾಕದವರು ಯಾವುದೇ ರೀತಿಯ ಸಹಾಯಕ್ಕಾಗಿ ನನ್ನನ್ನು ಸಂಪರ್ಕಿಸಬಾರದು ಎಂದು ಚುನಾವಣೆಯಲ್ಲಿ ಜಯಿಸಿರುವ ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ.
ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಬಾರಾಬಂಕಿ ಜಿಲ್ಲೆಯ ಹೈದರ್ಗಡ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ದಿನೇಶ್ ರಾವತ್, ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ.
'ನನ್ನ ಎದುರಾಳಿಗಳಿಗೆ ಗೌರವ ಕೊಡುವ ಅಭ್ಯಾಸ ನನಗಿಲ್ಲ. ನೀವು ನನಗೆ ಮತ ಹಾಕದಿದ್ದರೆ ಸಹಾಯಕ್ಕಾಗಿ ನನ್ನ ಬಳಿಗೆ ಬರಬೇಡಿ, ನನಗೆ ಮತ ಹಾಕಿದವರಿಗೆ ಮಾತ್ರ ನಾನು ಸಹಾಯ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾಗೊಂದು ವೇಳೆ ನೀವು ಮನಸ್ಸು ಬದಲಾಯಿಸಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದರೆ ಸಹಾಯಕ್ಕಾಗಿ ನನ್ನ ಬಳಿಗೆ ಬರಬಹುದು ಎಂಬ ಷರತ್ತನ್ನು ಇರಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ದಿನೇಶ್ ರಾವತ್, 25 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯ ಗಳಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಲು ಬಿಜೆಪಿ ಮುಖಂಡರು ನಿರಾಕರಿಸಿದ್ದಾರೆ.