ನವದೆಹಲಿ: ಮಾಸ್ಕ್ ಧರಿಸದೇ ಇರುವ ಬೇಜವಾಬ್ದಾರಿ ಜನರೇ ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ ಮಂಗಳವಾರ ಬೇಸರ ವ್ಯಕ್ತಪಡಿಸಿದೆ.
ಅವರು ಕಿರಿಯರೋ, ಹಿರಿಯರೋಎಂದು ನಾನು ಹೇಳುವುದಿಲ್ಲ, ಮಾಸ್ಕ್ ಹಾಕದೆ, ಕೊರೊನಾ ಎಚ್ಚರಿಕೆಯ ಮಾರ್ಗಸೂಚಿಗಳನ್ನು ಪಾಲಿಸದೆ ಇರುವವರು ಸೋಂಕು ಹರಡುತ್ತಿದ್ದಾರೆ ಎಂದು ಐಸಿಎಂಆರ್ ಮಹಾ ನಿರ್ದೇಶಕ ಬಲರಾಂ ಭಾರ್ಗವ ತಿಳಿಸಿದ್ದಾರೆ.
ದೇಶದಲ್ಲಿ ಮೂರು ಕೋವಿಡ್ ಲಸಿಕೆಗಳು ಕ್ಲಿನಿಕಲ್ ಹಂತದಲ್ಲಿವೆ. ಭಾರತ್ ಬಯೋಟೆಕ್ ಮತ್ತು ಝೈಡಸ್ ಕ್ಯಾಡಿಲಾ ಲಸಿಕೆಗಳು ಮೂರನೇ ಹಂತದಲ್ಲಿವೆ. ಸೀರಂ ಲಸಿಕೆ ಮೊದಲ ಹಂತ ಪೂರೈಸಿ ಎರಡನೇ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ 24 ಗಂಟೆಗಳಲ್ಲಿ 60, 975 ಹೊಸ ಪ್ರಕರಣಗಳು ದೃಢಪಟ್ಟ ಬೆನ್ನಲೇ ಅವರು ಈ ಹೇಳಿಕೆ ನೀಡಿದ್ದಾರೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 31,67,323ಕ್ಕೆ ಏರಿಕೆಯಾಗಿದ್ದು 58,390 ಜನರು ಮೃತಪಟ್ಟಿದ್ದಾರೆ.