ತಿರುವನಂತಪುರ: 'ಓಮೈಕ್ರಾನ್ಗಿಂತ ಹೆಚ್ಚು ಅಪಾಯಕಾರಿ ‘ಓ ಮಿತ್ರೋನ್’ಎಂದು ಕಾಂಗ್ರೆಸ್ನ ಹಿರಿಯ ನಾಯಕ ಶಶಿ ತರೂರ್ ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ವ್ಯಂಗ್ಯ ಮಾಡಿದ್ದಾರೆ. ಮೋದಿ ಅವರಿಂದ ‘ರಾಜಕೀಯ ಧ್ರುವೀಕರಣ ಹೆಚ್ಚಾಗಿದ್ದು, ಪ್ರಜಾಪ್ರಭುತ್ವ ದುರ್ಬಲಗೊಂಡಿದೆ’ಎಂದು ಹೇಳಿದ್ದಾರೆ.
ಸರ್ಕಾರ ಒಡೆದು ಆಳುವ ಮಾತುಗಳನ್ನಾಡುತ್ತಿದೆ ಮತ್ತು ದ್ವೇಷವನ್ನು ಹರಡುತ್ತಿದೆ ಎಂದು ತರೂರ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಓಮೈಕ್ರಾನ್ಗಿಂತ ಹೆಚ್ಚು ಅಪಾಯಕಾರಿ 'ಓ ಮಿತ್ರೋನ್'! ಹೆಚ್ಚಿದ ಧ್ರುವೀಕರಣ, ದ್ವೇಷ ಮತ್ತು ಧರ್ಮಾಂಧತೆಯ ಪ್ರಚಾರ, ಸಂವಿಧಾನದ ಮೇಲಿನ ದಾಳಿಗಳು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿರುವುದನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ ಎಂದು ಮಾಜಿ ಕೇಂದ್ರ ಸಚಿವರು ಟ್ವೀಟ್ ಮಾಡಿದ್ದಾರೆ.
Far more dangerous than #Omicron is “O Mitron”! We are measuring the consequences of the latter every day in increased polarisation, promotion of hatred & bigotry, insidious assaults on the Constitution & the weakening of our democracy. There is no “milder variant” of this virus.
‘ಮಿತ್ರೋನ್’,ಎಂದರೆ ಸ್ನೇಹಿತರೇ ಎಂದರ್ಥ. ಇದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಹೆಚ್ಚಾಗಿ ಬಳಸುವ ಪದವಾಗಿದೆ.
ತರೂರ್ ಟ್ವೀಟ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ‘ಮೊದಲು ಕಾಂಗ್ರೆಸ್ ಪಕ್ಷವು ಲಸಿಕೆ ಪಡೆಯುವ ಬಗ್ಗೆ ಹಿಂಜರಿಕೆಯನ್ನು ಹರಡಿತು. ಈಗ ಓಮೈಕ್ರಾನ್ ಅಪಾಯಕಾರಿ ಅಲ್ಲ ಎಂದು ಹೇಳುತ್ತಿದೆ. ಕೋವಿಡ್ -19 ಆರಂಭದಲ್ಲಿ ಅಖಿಲೇಶ್ ಅವರು ಕೋವಿಡ್ಗಿಂತ ಸಿಎಎ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದರು. ಇವರಿಗೆ ಸಾರ್ವಜನಿಕ ಜವಾಬ್ದಾರಿಯ ಪ್ರಜ್ಞೆ ಇಲ್ಲವೇ?’ಎಂದು ಟ್ವೀಟ್ ಮಾಡಿದ್ದಾರೆ.