ನವದೆಹಲಿ: ಇಂಧನದ ಮೇಲೆ ವಿಧಿಸಿರುವ ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ಉಚಿತ ಲಸಿಕೆ, ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಉಚಿತ ಊಟ, ಅಡುಗೆ ಅನಿಲ ಹಾಗೂ ಇತರ ಯೋಜನೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಪೆಟ್ರೋಲ್ ಹಾಗೂ ಡೀಸೆಲ್ ದರ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಖಂಡಿಸಿ ಇಂಧನದ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿರುವ ಸಂದರ್ಭದಲ್ಲಿಪುರಿ ಈ ಹೇಳಿಕೆ ನೀಡಿದ್ದಾರೆ.
ದೇಶೀಯ ದರಗಳು ಅಂತರರಾಷ್ಟ್ರೀಯ ತೈಲ ಮಾರುಕಟ್ಟೆ ಬೆಲೆಯೊಂದಿಗೆ ಸಂಬಂಧ ಹೊಂದಿವೆ. ವಿವಿಧ ಕಾರಣಗಳಿಂದಾಗಿ ಬೆಲೆ ಏರಿಕೆಯಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದೂ ಮನವಿ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಪುರಿ, ʼಬೆಲೆ ಏರಿಕೆಯಾಗುತ್ತಿದೆ. ನೀವು ತೆರಿಗೆ ಇಳಿಸುತ್ತಿಲ್ಲವೇಕೆ?ʼ ಎಂಬುದು ನಾವು ಭಾರತದಲ್ಲಿ ಮಾತ್ರ ಕೇಳಬಹುದಾದ ತುಂಬಾ ಸರಳವಾದ ರಾಜಕೀಯ ನಿರೂಪಣೆಯಾಗಿದೆ. ಹಾಗಾಗಿಯೇ ಪ್ರತಿಭಾರಿ ಬೆಲೆ ಏರಿಕೆಯಾದಾಗಲೂ ಅದು ನಮ್ಮ ಬುಡಕ್ಕೆ ನಾವೇ ಕೊಡಲಿ ಹಾಕಿಕೊಳ್ಳುವಂತಹ ಪರಿಸ್ಥಿತಿಯನ್ನು ತಂದಿಡುತ್ತದೆʼ ಎಂದಿದ್ದಾರೆ.
ಗ್ರಾಹಕರಿಗೆ ತೆರಿಗೆ ಹೊರೆಯನ್ನು ಕಡಿತಗೊಳಿಸಲಾಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪುರಿ, ʼನಿನ್ನೆ ಶತಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆಯ ಗುರಿ ತಲುಪಿದ್ದೇವೆ.90 ಕೋಟಿ ಜನರಿಗೆ ಒಂದು ವರ್ಷ (ಸಾಂಕ್ರಾಮಿಕದ ಸಂದರ್ಭದಲ್ಲಿ) ಆಹಾರ ಪೂರೈಸಿದ್ದೇವೆ. ಉಜ್ವಲ (ಎಂಟು ಕೋಟಿ ಬಡವರಿಗಾಗಿ ಉಚಿತವಾಗಿ ಅಡುಗೆ ಅನಿಲ ಪೂರೈಸಲು) ಯೋಜನೆ ನೀಡಿದ್ದೇವೆ. ಇವೆಲ್ಲವೂ ಮತ್ತು ಇನ್ನೂ ಹಲವು ಕಾರ್ಯಗಳು ಪ್ರತಿ ಲೀಟರ್ಗೆ ಕೇಂದ್ರ ಸರ್ಕಾರ ವಿಧಿಸುವ ₹ 32 ತೆರಿಗೆಯಿಂದ ಸಾಧ್ಯವಾಗಿವೆʼ ಎಂದು ಪ್ರತಿಪಾದಿಸಿದ್ದಾರೆ.
ರಸ್ತೆ ನಿರ್ಮಾಣ, ಬಡವರಿಗಾಗಿ ಮನೆ ನಿರ್ಮಾಣ ಮತ್ತು ಸಾಮಾಜ ಕಲ್ಯಾಣ ಯೋಜನೆಗಾಗಿಯೂ ತೆರಿಗೆ ಹಣ ಬಳಸಲಾಗಿದೆ ಎಂದು ತಿಳಿಸಿದ್ದಾರೆ.
ತೆರಿಗೆ ಇಳಿಕೆ ಬೇಡಿಕೆ ಬಗ್ಗೆ, ʼನಾನು ಹಣಕಾಸು ಸಚಿವನಲ್ಲ. ಹಾಗಾಗಿ ನಾನು ಉತ್ತರ ನೀಡುವುದು ಸೂಕ್ತವಲ್ಲʼ ಎಂದೂ ಪ್ರತಿಕ್ರಿಯಿಸಿದ್ದಾರೆ.