ನವದೆಹಲಿ: ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಅನೇಕ ಗಣ್ಯರು ಮಂಗಳವಾರ ಬಾಬಾ ಸಾಹೇಬ್ ಪ್ರತಿಮೆಗೆ ಗೌರವ ನಮನ ಸಲ್ಲಿಸಿ, ದೇಶಕ್ಕಾಗಿ ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ.
On Mahaparinirvan Diwas, I pay homage to Dr. Babasaheb Ambedkar and recall his exemplary service to our nation. His struggles gave hope to millions and his efforts to give India such an extensive Constitution can never be forgotten. pic.twitter.com/WpCjx0cz7b
ಅಂಬೇಡ್ಕರ್ ಕೊಡುಗೆಗಳ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಮಹಾಪರಿನಿರ್ವಾಣ ದಿವಸದಂದು, ನಾನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ ಮತ್ತು ನಮ್ಮ ದೇಶಕ್ಕಾಗಿನ ಅವರ ಸೇವೆಗಳನ್ನು ಸ್ಮರಿಸಿತ್ತೇನೆ. ಅವರ ಹೋರಾಟಗಳು ಲಕ್ಷಾಂತರ ಜನರ ಪಾಲಿಗೆ ಆಶಾಕಿರಣವಾಗಿತ್ತು. ಭಾರತದ ಸಂವಿಧಾನ ರಚನೆ ನಿಟ್ಟಿನಲ್ಲಿ ಅವರ ಪ್ರಯತ್ನಗಳನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿಗಳೊಂದಿಗೆ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿರುವ ಚಿತ್ರವನ್ನು ಮೋದಿ ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಸಂವಿಧಾನ ಶಿಲ್ಪಿಗೆ ಗೌರವ ನಮನ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ. ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಅವರಿಗೆ ಗೌರವಪೂರ್ವಕ ನಮನಗಳು. ಸದೃಢ, ಸಶಕ್ತ, ಸಮಾನತೆಯ ಭಾರತಕ್ಕಾಗಿ ಅವರು ಕಂಡಂತಹ ಕನಸುಗಳನ್ನು ನನಸು ಮಾಡುವ ಸಂಕಲ್ಪವನ್ನು ಮಾಡೋಣ ಎಂದು ಬೊಮ್ಮಾಯಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕೂಡ ಟ್ವೀಟ್ ಮಾಡಿದ್ದು, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಹಾದಿಯನ್ನು ಮರೆಯದೆ, ನಮ್ಮೆಲ್ಲರ ವಿಚಾರ ಮತ್ತು ಆಚಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಮ್ಮೊಳಗೆ ಸದಾ ಜೀವಂತವಾಗಿರಿಸಿಕೊಂಡು, ನಮಗಾಗಿ ಅವರು ಕಂಡ ಕನಸುಗಳನ್ನು ನನಸು ಮಾಡೋಣ ಎಂದಿದ್ದಾರೆ.