ಪುದುಚೇರಿ: ಪುದುಚೇರಿಯಲ್ಲಿ ಕಾಂಗ್ರೆಸ್ನ ಮತ್ತೊಬ್ಬ ಶಾಸಕ ಭಾನುವಾರ ರಾಜೀನಾಮೆ ನೀಡಿದ್ದಾರೆ. ಇದರಿಂದ, ಇದೇ 22ರಂದು ಬಹುಮತ ಸಾಬೀತುಪಡಿಸಲಿರುವ ವಿ. ನಾರಾಯಣಸ್ವಾಮಿ ನೇತೃತ್ವದ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಕೆ. ಲಕ್ಷ್ಮಿನಾರಾಯಣನ್ ಅವರು ಭಾನುವಾರ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ವಿ.ಪಿ. ಶಿವಕೊಲುಂಧು ಅವರಿಗೆ ಸಲ್ಲಿಸಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿರುವುದಾಗಿ ಲಕ್ಷ್ಮಿನಾರಾಯಣನ್ ತಿಳಿಸಿದ್ದಾರೆ.
ಲಕ್ಷ್ಮಿನಾರಾಯಣನ್ ರಾಜೀನಾಮೆಯಿಂದಾಗಿ, 33 ಸದಸ್ಯರನ್ನೊಳಗೊಂಡ ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆ 13ಕ್ಕೆ ಕುಸಿದಿದೆ. ವಿರೋಧ ಪಕ್ಷ 14 ಶಾಸಕರನ್ನು ಹೊಂದಿದೆ. ಐದು ಸ್ಥಾನಗಳು ಖಾಲಿ ಉಳಿದಿವೆ.
ಮಾಜಿ ಸಚಿವರಾದ ಎ.ನಮಶಿವಯಂ ಮತ್ತು ಮಲ್ಲಾಡಿ ಕೃಷ್ಣ ರಾವ್ ಸೇರಿದಂತೆ ನಾಲ್ವರು ಕಾಂಗ್ರೆಸ್ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ನಮಶಿವಯಂ ಈಗಾಗಲೇ ಬಿಜೆಪಿ ಸೇರಿದ್ದಾರೆ. ಮತ್ತೊಬ್ಬ ಶಾಸಕರನ್ನು ಈ ಮೊದಲೇ ಅನರ್ಹಗೊಳಿಸಲಾಗಿತ್ತು.