ನವದೆಹಲಿ: ಅದಾನಿ ಸಮೂಹದ ಮೇಲಿನ ವಂಚನೆ ಆರೋಪಗಳ ತನಿಖೆ ನಡೆಸುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ಸಂಸತ್ ಭವನದಿಂದ ಜಾರಿ ನಿರ್ದೇಶನಾಲಯದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿವೆ.
ಸಂಸತ್ ಭವನದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ಸೇರಿದ್ದ ವಿರೋಧ ಪಕ್ಷಗಳ ನಾಯಕರು ತಮ್ಮ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಿದರು.
ಮಧ್ಯಾಹ್ನ 12.30ಕ್ಕೆ ಸಂಸತ್ ಭವನದಿಂದ ಆರಂಭವಾಗಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ವಿರೋಧ ಪಕ್ಷಗಳ ಸಂಸದರು ಭಾಗವಹಿಸಲಿದ್ದಾರೆ.
ಅದಾನಿ ಸಮೂಹವು ಕೃತಕವಾಗಿ ಷೇರುಗಳ ಬೆಲೆ ಏರಿಳಿತ ಮಾಡುವ ಮೂಲಕ ಖರೀದಿದಾರರನ್ನು ವಂಚಿಸಿತ್ತು ಎಂಬ ಕುರಿತು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್ಬರ್ಗ್ ರಿಸರ್ಚ್ ವರದಿಯ ಬಳಿಕ ಕಂಪನಿಯ ಷೇರು ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿದಿತ್ತು.
ಈ ಕುರಿತಂತೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
ಆದರೆ, ಈ ಆರೋಪಗಳನ್ನು ತಳ್ಳಿ ಹಾಕಿದ್ದ ಅದಾನಿ ಸಮೂಹವು, ದುರುದ್ದೇಶಪೂರಿತ, ಆಧಾರರಹಿತ ಮತ್ತು ಭಾರತದ ಮೇಲಿನ ವ್ಯವಸ್ಥಿತ ದಾಳಿ ಎಂದು ಕರೆದಿತ್ತು.
ಈ ನಡುವೆ, ಅಡುಗೆ ಅನಿಲ ದರ ಏರಿಕೆಗೆ ಸಂಬಂಧಿಸಿದಂತ ಸರ್ಕಾರದಿಂದ ಪ್ರತಿಕ್ರಿಯೆಗೆ ಒತ್ತಾಯಿಸಿ, ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರು, ಸಂಸತ್ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.