ನವದೆಹಲಿ (ಪಿಟಿಐ): ‘ಸಂವಿಧಾನ ಮತ್ತು ನಾಗರಿಕ ಹಕ್ಕುಗಳನ್ನು ರಕ್ಷಿಸಲು ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಯುವ ಸಮುದಾಯ ಸದಾ ಸಿದ್ಧವಿರಬೇಕು’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.
‘ದೇಶ ಹಾಗೂ ಸಮಾಜಕ್ಕೆ ಎದುರಾಗುವ ಬೆದರಿಕೆಗಳ ವಿರುದ್ಧ ಸದಾ ಜಾಗರೂಕರಾಗಿರಬೇಕು. ಇಲ್ಲದೇ ಹೋದರೆ ಬ್ರಿಟಿಷರ ವಿರುದ್ಧ ಹೋರಾಡಿ ಗಳಿಸಿರುವ ಸ್ವಾತಂತ್ರ್ಯ, ರಾಜಕೀಯ ಮತ್ತು ಸಾಮಾಜಿಕ ಸ್ವಾತಂತ್ರ್ಯ ಹಾಗೂ ನಾಗರಿಕ ಹಕ್ಕುಗಳು ಕಳೆದುಹೋಗಲಿವೆ’ ಎಂದು ತಿಳಿಸಿದ್ದಾರೆ.
‘ಹಲೋ’ ಬದಲು ‘ವಂದೇ ಮಾತರಂ’
ಮುಂಬೈ (ಪಿಟಿಐ): ‘ಸರ್ಕಾರಿ ಅಧಿಕಾರಿಗಳು ಇನ್ನು ಮುಂದೆ ಕಚೇರಿ ಅವಧಿಯಲ್ಲಿ ದೂರವಾಣಿ ಕರೆ ಸ್ವೀಕರಿಸುವಾಗ ‘ಹಲೋ’ ಬದಲು ‘ವಂದೇ ಮಾತರಂ’ ಎಂದೇ ಹೇಳಬೇಕು. ಮುಂದಿನ ವರ್ಷದ ಜನವರಿ 26ರವರೆಗೂ ಇದನ್ನು ಪಾಲಿಸಬೇಕು. ಈ ಸಂಬಂಧ ಆಗಸ್ಟ್ 18ರಂದು ಆದೇಶ ಹೊರಡಿಸಲಾಗುತ್ತದೆ’ ಎಂದು ಮಹಾರಾಷ್ಟ್ರದ ನೂತನ ಸಂಸ್ಕೃತಿ ಸಚಿವ ಸುಧೀರ್ ಮುಂಗಟಿವಾರ್ ಭಾನುವಾರ ಹೇಳಿದ್ದಾರೆ.