ನವದೆಹಲಿ: ಗುಜರಾತಿನ ಕರಾವಳಿ ಭಾಗದ ಮೂಲಕ ಭಾರತ ಪ್ರವೇಶಿಸಿದ ಪಾಕಿಸ್ತಾನದ ಮೀನುಗಾರನೊಬ್ಬನನ್ನು ಬಂಧಿಸಲಾಗಿದ್ದು, ಆತನ ದೋಣಿಯನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಗಡಿ ಭದ್ರಾತಾ ಪಡೆ ಭಾನುವಾರ ತಿಳಿಸಿದೆ.
ಗುಜರಾತಿನ ಕರಾವಳಿ ಪ್ರದೇಶದ ಬಳಿ ಅಧಿಕಾರಿಗಳು ಶನಿವಾರ ಸಂಜೆ ಗಸ್ತು ಹಾಕುತ್ತಿದ್ದ ವೇಳೆ ಸರ್ ಕ್ರೀಕ್ ಪ್ರಾಂತ್ಯದಲ್ಲಿ ಪಾಕಿಸ್ತಾನದ ಮೀನುಗಾರನನ್ನು ಬಂಧಿಸಲಾಗಿದೆ. ಆತನನ್ನು ಸಿಂಧ್ ಪ್ರಾಂತ್ಯದ ನಿವಾಸಿ ಖಲೀದ್ ಹುಸೇನ್ ಎಂದು ಗುರುತಿಸಲಾಗಿದೆ ಎಂದು ಬಿಎಸ್ಎಫ್ ಮಾಹಿತಿ ನೀಡಿದೆ.
ಈ ವೇಳೆ ಆತನ ಬೋಟ್, 20 ಲೀಟರ್ ಡಿಸೇಲ್, ಮೊಬೈಲ್ ಫೋನ್, ಮೀನು ಹಿಡಿಯುವ ಎರಡು ಬಲೆ, 8 ಪ್ಲಾಸ್ಟಿಕ್ ನೂಲು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.
ಬಿಎಸ್ಎಫ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಈವರೆಗೂ ಯಾವುದೇ ಸಂಶಯಾಸ್ಪದ ಚಟುವಟಿಕೆ ಗಮನಕ್ಕೆ ಬಂದಿಲ್ಲ ಎಂದು ಅವರು ಹೇಳಿದರು.