ಇಸ್ಲಾಮಾಬಾದ್: ಬ್ರಿಟನ್ ಮತ್ತು ಪಾಕಿಸ್ತಾನದ ನಡುವೆ ಹಸ್ತಾಂತರ ಒಪ್ಪಂದ ಇಲ್ಲದ ಕಾರಣ ನವಾಜ್ ಷರೀಫ್ ಪಾಕಿಸ್ತಾನಕ್ಕೆ ವಾಪಾಸು ಕರೆತರುವುದು ಕಷ್ಟಸಾಧ್ಯ.ಹಾಗಾಗಿ ಹಸ್ತಾಂತರಕ್ಕೆ ಬೇಕಾದ ಎಲ್ಲಾ ರೀತಿಯ ಕಾರ್ಯತಂತ್ರ ರೂಪಿಸುವಂತೆ ಪಕ್ಷದ ನಾಯಕರಿಗೆಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೂಚಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಇಮ್ರಾನ್ ಖಾನ್,‘ ಪ್ರತಿಪಕ್ಷಗಳು ನಮ್ಮ ಸರ್ಕಾರವನ್ನು ಉರುಳಿಸಲು ಎಲ್ಲಾ ರೀತಿ ಪ್ರಯತ್ನಗಳನ್ನು ಮಾಡುತ್ತಿವೆ. ಅವುಗಳನ್ನು ನಾವು ವಿಫಲಗೊಳಿಸಬೇಕು’ ಎಂದು ಹೇಳಿದರು.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಿಎಂಎಲ್–ಎನ್ ಪಾರ್ಟಿ ವರಿಷ್ಠ ನವಾಜ್ ಷರೀಫ್ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿವೈದ್ಯಕೀಯ ಚಿಕಿತ್ಸೆಗೆಂದು ಲಂಡನ್ಗೆ ತೆರಳಿದ್ದರು. ಅಂದಿನಿಂದ ಷರೀಫ್ ಲಂಡನ್ನಲ್ಲಿ ವಾಸವಾಗಿದ್ದಾರೆ.
ನವಾಜ್ ಷರೀಫ್ ಹಸ್ತಾಂತರಕ್ಕಾಗಿ ಇಮ್ರಾನ್ ಖಾನ್ ಹೊಸ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಸಮಿತಿಯು ಸಚಿವರಾದ ಶಾ ಮೆಹಮೂದ್ ಖುರೇಷಿ, ಅಸಾದ್ ಉಮ್ಮರ್, ಫಾವದ್ ಚೌಧರಿ,ಶಫ್ಕತ್ ಮಹಮೂದ್ ಮತ್ತು ಪರ್ವೇಜ್ ಖಟ್ಟಕ್ ಅವರನ್ನು ಒಳಗೊಂಡಿದೆ.