ನವದೆಹಲಿ: ಪಕ್ಷದ ಏಕ ನಾಯಕತ್ವದ ವಿಷಯಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆಯ ಸಾಮಾನ್ಯ ಮತ್ತು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಯಾವುದೇ ಅಘೋಷಿತ ನಿರ್ಣಯಗಳನ್ನು ಅಂಗೀಕರಿಸುವುದನ್ನು ನಿರ್ಬಂಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ.
ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ರಜಾಕಾಲದ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
‘ಪ್ರತಿವಾದಿಗಳಿಗೆ ನೋಟಿಸ್ ನೀಡಲಾಗುವುದು, ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕು. ಪ್ರಕರಣದ ವಾಸ್ತವಾಂಶಗಳು ವ್ಯಾಜ್ಯದ ವಿಷಯ ಮತ್ತು ಹೈಕೋರ್ಟ್ ಆದೇಶಗಳ ಸಂದರ್ಭಗಳ ದೃಷ್ಟಿಯಿಂದ ಜೂನ್ 23, 2022 ರ ಆದೇಶದ ಜಾರಿ ಮತ್ತು ಪರಿಣಾಮವನ್ನು ತಡೆಹಿಡಿಯುವುದು ಸೂಕ್ತವೆಂದು ಪರಿಗಣಿಸಲಾಗಿದೆ’ಎಂದು ಪೀಠ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠವು ಮಧ್ಯರಾತ್ರಿ ತುರ್ತು ವಿಚಾರಣೆ ನಡೆಸಿ ಜೂನ್ 23 ರಂದು ಬೆಳಿಗ್ಗೆ 4 ಗಂಟೆಗೆ ಆದೇಶವನ್ನು ನೀಡಿತ್ತು.
ಎಐಎಡಿಎಂಕೆಯ ಸಾಮಾನ್ಯ ಮತ್ತು ಕಾರ್ಯಕಾರಿ ಮಂಡಳಿಗಳ ಸಭೆಯಲ್ಲಿ ಯಾವುದೇ ಅಘೋಷಿತ ನಿರ್ಣಯಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ತೀರ್ಪು ನೀಡಿದ್ದ ನ್ಯಾಯಾಲಯ, ಪಕ್ಷದ ಜಂಟಿ ಸಂಯೋಜಕ ಪಳನಿಸ್ವಾಮಿ ನೇತೃತ್ವದ ಬಣವು ಏಕ ನಾಯಕತ್ವದ ವಿಚಾರದ ಕುರಿತಂತೆ ಯಾವುದೇ ನಿರ್ಣಯ ಕೈಗೊಳ್ಳದಂತೆ ಸೂಚಿಸಿತ್ತು.