ಚಂಡೀಗಢ: ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಮತ್ತು ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಗುರುವಾರ ಹಿಂದಿರುಗಿಸುವ ಮೂಲಕ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
‘ಸಾಮಾನ್ಯ ರೈತರಿಂದಾಗಿ ನಾನು ಇಂದು ಈ ಸ್ಥಾನದಲ್ಲಿ ನಿಂತಿದ್ದೇನೆ. ಇಂದು ಅವರು ತಮ್ಮ ಗೌರವಕ್ಕಿಂತ ಹೆಚ್ಚಿನದ್ದನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ಪದ್ಮ ವಿಭೂಷಣ ಪ್ರಶಸ್ತಿಯನ್ನು ನನ್ನ ಬಳಿ ಉಳಿಸಿಕೊಳ್ಳುವುದರಲ್ಲಿ ಏನೂ ಅರ್ಥವಿಲ್ಲ’ ಎಂದು ಅವರು ಹೇಳಿದರು.
‘ಭಾರತ ಸರ್ಕಾರವು ರೈತರಿಗೆ ಮಾಡಿದ ದ್ರೋಹ ಮತ್ತು ಶಾಂತಿಯುತ ಪ್ರತಿಭಟನೆಗೆ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯತೆಯನ್ನು ವಿರೋಧಿಸಿ ಪ್ರಕಾಶ್ ಸಿಂಗ್ ಬಾದಲ್ ಅವರು ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಗುರುವಾರ ಹಿಂದಿರುಗಿಸಿದ್ದಾರೆ’ ಎಂದು ಶಿರೋಮಣಿ ಅಕಾಲಿದಳ ಹೇಳಿಕೆ ಬಿಡುಗಡೆ ಮಾಡಿದೆ.
ರೈತರು ತಮ್ಮ ಮೂಲಭೂತ ಹಕ್ಕನ್ನು ಉಳಿಸಿಕೊಳ್ಳಲು ತೀವ್ರ ಚಳಿಯ ಮಧ್ಯೆಯೂ ಕಹಿ ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರಕಾಶ್ ಸಿಂಗ್ ಬಾದಲ್ ಅವರು ಅಭಿಪ್ರಾಯಪಟ್ಟರು.