ನವದೆಹಲಿ: ‘ಸಂಸತ್ ಎಂಬುದು ರಾಜಕಾರಣಕ್ಕೆ ಮಾತ್ರ ಸೀಮಿತವಲ್ಲ. ನೀತಿ ನಿರೂಪಣೆಗೂ ಅದು ವೇದಿಕೆಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.
‘ಸಂಸದ್ ಟಿವಿ’ಗೆ ಚಾಲನೆ ನೀಡಲು ಸಂಸತ್ ಭವನ ಸಂಕೀರ್ಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಮೊದಲಿದ್ದ ಲೋಕಸಭಾ ಟಿವಿ ಹಾಗೂ ರಾಜ್ಯಸಭಾ ಟಿವಿ ವಾಹಿನಿಗಳನ್ನು ವಿಲೀನಗೊಳಿಸಿ, ‘ಸಂಸದ್ ಟಿವಿ’ ರೂಪಿಸಲಾಗಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ದು ಹಾಗೂ ಪ್ರಧಾನಿ ಮೋದಿ ಜಂಟಿಯಾಗಿ ನೂತನ ಸುದ್ದಿವಾಹಿನಿಗೆ ಚಾಲನೆ ನೀಡಿದರು.
‘ಟಿವಿ ವಾಹಿನಿಗಳ ಮೂಲಕ ಹಲವಾರು ವಿಷಯಗಳನ್ನು ಪ್ರಸಾರ ಮಾಡಲಾಗುತ್ತದೆ. ಅವು ಜನರನ್ನು ಬೆಸೆಯುತ್ತವೆ. ಹೀಗಾಗಿ ಅದನ್ನು ಕೇವಲ ವಿಷಯ ಎನ್ನುವುದಕ್ಕಿಂತ ‘ಬಾಂಧವ್ಯ’ ಎನ್ನುವುದೇ ಸೂಕ್ತ’ ಎಂದು ಮೋದಿ ಹೇಳಿದರು.
‘ವಾಹಿನಿಗಳ ಮೂಲಕ ಬಿತ್ತರವಾಗುವ ಸುದ್ದಿಗಳ ಮೂಲಕ ಸಾಮಾನ್ಯ ಪ್ರಜೆ ಸಹ ಸಂಸತ್ನೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ. ತಾನು ಕೂಡ ಸಂಸತ್ನ ಭಾಗ ಎಂಬ ಭಾವನೆ ಆತನಲ್ಲಿ ಮೂಡುತ್ತದೆ’ ಎಂದರು.