ಗಾಲ್ವನ್ ಕಣಿವೆಗೆ ಭೇಟಿ ನೀಡಲು ಸಂಸದೀಯ ಸ್ಥಾಯಿ ಸಮಿತಿ ನಿರ್ಧಾರ

ನವದೆಹಲಿ: ಚೀನಾ ಸೇನಾ ಪಡೆಗಳೊಂದಿಗೆ ಹಿಂಸಾತ್ಮಕ ಮುಖಾಮುಖಿಗೆ ಸಾಕ್ಷಿಯಾಗಿದ್ದ ಪೂರ್ವ ಲಡಾಖ್ನ ಗಾಲ್ವನ್ ಕಣಿವೆ, ಪಾಂಗಾಂಗ್ ಸರೋವರ ಪ್ರದೇಶಕ್ಕೆ ಭೇಟಿ ನೀಡಲು ರಕ್ಷಣಾ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ಜುಯೆಲ್ ಓರಮ್ ಅಧ್ಯಕ್ಷತೆಯ 30 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯು ಮೇ ಕೊನೆಯ ವಾರ ಅಥವಾ ಜೂನ್ ವೇಳೆಗೆ ಗಡಿ ಪ್ರದೇಶಕ್ಕೆ ಭೇಟಿ ನೀಡಲು ಬಯಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಸಮಿತಿಯ ಸದಸ್ಯರಾಗಿದ್ದಾರೆ.
ಓದಿ: ಹುತಾತ್ಮ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ಸೇನಾ ಮುಖ್ಯಸ್ಥ ನರವಣೆ ಭರವಸೆ
ಕಳೆದ ವಾರ ನಡೆದ ಸಮಿತಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆ ಸಭೆಗೆ ರಾಹುಲ್ ಗಾಂಧಿ ಹಾಜರಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಸಮಿತಿಯು ನೈಜ ನಿಯಂತ್ರಣ ರೇಖೆ ಪ್ರದೇಶಕ್ಕೆ (ಎಲ್ಎಸಿ) ಭೇಟಿ ನೀಡಬೇಕಿದ್ದರೆ ಸರ್ಕಾರದ ಅನುಮತಿ ಅಗತ್ಯವಿದೆ.
ಒಂಬತ್ತು ತಿಂಗಳ ಮುಖಾಮುಖಿ ಬಳಿಕ ಭಾರತ–ಚೀನಾ ಪಡೆಗಳು ಪಾಂಗಾಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ಭಾಗಗಳ ಮುಂಚೂಣಿ ನೆಲೆಗಳಿಂದ ಸೇನೆ ಹಿಂಪಡೆಯುವ ವಿಚಾರದಲ್ಲಿ ಒಮ್ಮತಕ್ಕೆ ಬಂದಿವೆ. ಹಂತ–ಹಂತವಾಗಿ, ಸಮನ್ವಯ ಮತ್ತು ಪರಿಶೀಲನೆಯೊಂದಿಗೆ ಪಡೆಗಳನ್ನು ಹಿಂಪಡೆಯುವ ಬಗ್ಗೆ ಒಮ್ಮತಕ್ಕೆ ಬರಲಾಗಿದೆ.
ಮುಂಚೂಣಿ ನೆಲೆಗಳಿಂದ ಸೇನೆ ಹಿಂಪಡೆಯುವ ಒಪ್ಪಂದಕ್ಕೆ ಸಂಬಂಧಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಸಂಸತ್ನಲ್ಲಿ ವಿಸ್ತೃತ ವಿವರಣೆ ನೀಡಿದ್ದರು.
ಓದಿ: ಗಾಲ್ವಾನ್ ಕಣಿವೆಯಲ್ಲಿನ ಸಂಘರ್ಷ ಚೀನಾದ ಯೋಜಿತ ಕೃತ್ಯ: ವರದಿ
ಒಪ್ಪಂದದ ಪ್ರಕಾರ, ಪಾಂಗಾಂಗ್ ಸರೋವರದ ಉತ್ತರ ದಂಡೆಯ ‘ಫಿಂಗರ್ 8’ ಪ್ರದೇಶದಿಂದ ಚೀನಾವು ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಿದೆ. ಭಾರತೀಯ ಸೇನೆ ಸಿಬ್ಬಂದಿಯು ತಮ್ಮ ಕಾಯಂ ನೆಲೆಯಾದ, ‘ಫಿಂಗರ್ 3’ ಪ್ರದೇಶದಲ್ಲಿರುವ ‘ಧನ್ ಸಿಂಗ್ ಥಾಪಾ’ ಪೋಸ್ಟ್ನಲ್ಲಿ ನೆಲೆಸಲಿದ್ದಾರೆ.
ಇಂಥದ್ದೇ ಕ್ರಮವನ್ನು ಸರೋವರದ ದಕ್ಷಿಣ ದಂಡೆಯಲ್ಲೂ ಅನುಸರಿಸಲಾಗುವುದು ಎಂದು ರಾಜನಾಥ್ ತಿಳಿಸಿದ್ದರು.
ಓದಿ: ಭಾರತ– ಚೀನಾ ಗಡಿಯಲ್ಲಿ ಶಾಂತಿ: ಆರ್ಥಿಕ ಪ್ರಗತಿ, ಸಾಮರಸ್ಯಕ್ಕೆ ಅನಿವಾರ್ಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.