ಅಹಮದಾಬಾದ್: ಗುಜರಾತ್ನ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳು ಭೂಗತ ಪಾತಕಿ ಛೋಟಾ ಶಕೀಲ್ ಸಹಚರ ಎನ್ನಲಾದ ವ್ಯಕ್ತಿಯನ್ನು ಬುಧವಾರ ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯು ಬಿಜೆಪಿ ಮುಖಂಡನ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ವ್ಯಕ್ತಿಯು ನಗರದ ರಿಲೀಫ್ ರಸ್ತೆಯ ಹೊಟೇಲ್ವೊಂದರಲ್ಲಿ ತಂಗಿದ್ದ. ಈ ಮಾಹಿತಿಯನ್ನು ಆಧರಿಸಿ ಆತನನ್ನು ಬಂಧಿಸಲು ತೆರಳಿದ್ದ ನಮ್ಮ ತಂಡದವರ ಮೇಲೆ ಮಂಗಳವಾರ ರಾತ್ರಿ ಒಂದು ಸುತ್ತಿನ ಗುಂಡಿನ ದಾಳಿ ನಡೆಸಿದ್ದ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ’ ಎಂದು ಅವರು ಹೇಳಿದ್ದಾರೆ.
‘ಬಂಧಿತನಿಂದ ಎರಡು ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ವಿಚಾರಣೆಯ ಬಳಿಕ ಆತನ ವಿವರವನ್ನು ಬಹಿರಂಗಪಡಿಸುತ್ತೇವೆ’ ಎಂದಿದ್ದಾರೆ.
‘ನನ್ನ ಹತ್ಯೆಗೆ ಸಂಚು ರೂಪಿಸಿದ್ದ ಶಾರ್ಪ್ ಶೂಟರ್ ಒಬ್ಬನನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿರುವುದಾಗಿ ಗೃಹ ಸಚಿವ ಪ್ರದೀಪ್ಸಿನ್ಹಾ ಜಡೇಜ ಅವರು ಮಾಹಿತಿ ನೀಡಿದ್ದಾರೆ’ ಎಂದು ರಾಜ್ಯ ಬಿಜೆಪಿ ಮುಖಂಡ ಗೋರ್ಧನ್ ಜಡಾಫಿಯಾ ಹೇಳಿದ್ದಾರೆ.