ನವದೆಹಲಿ: ಅಡುಗೆ ಎಣ್ಣೆ ಆಮದಿನ ಮೇಲಿನ ಅವಲಂಬನೆ ತಗ್ಗಿಸಲು ಹಾಗೂ ತಾಳೆ ಎಣ್ಣೆ ಸೇರಿದಂತೆ ಎಲ್ಲ ರೀತಿಯ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ‘ನ್ಯಾಷನಲ್ ಎಡಿಬಲ್ ಆಯಿಲ್ ಮಿಷನ್– ಆಯಿಲ್ ಪಾಮ್(ಎನ್ಎಂಇಒ–ಒಪಿ) ಅನ್ನು ಘೋಷಿಸಿದರು.
ಪಿಎಂ ಕಿಸಾನ್ ಯೋಜನೆಯ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾಗುವ ಈ ಮಿಷನ್ಗಾಗಿ ₹11 ಸಾವಿರ ಕೋಟಿ ಹೆಚ್ಚು ಬಂಡವಾಳ ಹೂಡಿಕೆ ಮಾಡಲಾಗುವುದು‘ ಎಂದು ಹೇಳಿದರು.
‘ಭಾರತ ಅಕ್ಕಿ, ಗೋದಿ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಸ್ವಾಲಂಬನೆ ಸಾಧಿಸಿದೆ. ಆದರೆ, ಅಡುಗೆ ತೈಲವನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಅಡುಗೆ ತೈಲ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಬೇಕು. ಈ ಉದ್ದೇಶದಿಂದಲೇ ಎನ್ಎಂಇಪಿ–ಒಪಿಯನ್ನು ಆರಂಭಿಸಲಾಗಿದೆ‘ ಎಂದು ಹೇಳಿದರು.
ಇದೇ ವೇಳೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ₹19,500 ಕೋಟಿ ಮೊತ್ತವನ್ನು 9.75 ಕೋಟಿ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿದರು.
ತಾಳೆ ಎಣ್ಣೆ ಮತ್ತು ಇತರ ಎಣ್ಣೆ ಕಾಳುಗಳನ್ನು ಉತ್ಪಾದನೆಯನ್ನು ಉತ್ತೇಜಿಸುವುದಕ್ಕಾಗಿ ಕೇಂದ್ರ ಸರ್ಕಾರ, ರೈತರಿಗೆ ಗುಣಮಟ್ಟದ ಬೀಜಗಳಿಂದ ಹಿಡಿದು ತಂತ್ರಜ್ಞಾನದವರೆಗೆ ರೈತರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು.
ಒಟ್ಟು ಆಮದು ಪ್ರಮಾಣದಲ್ಲಿ ತಾಳೆ ಎಣ್ಣೆ ಪ್ರಮಾಣ ಶೇ 55ರಷ್ಟಿದೆ. ಹಾಗಾಗಿ, ದೇಶದಲ್ಲಿರುವ ಅಡುಗೆ ಎಣ್ಣೆ ಬೇಡಿಕೆಯನ್ನು ಪೂರೈಸಲು ಆಮದಿನ ಮೇಲೆ ಅವಲಂಬಿಸಲಾಗಿದೆ. ಹೀಗಾಗಿ ದೇಶದಲ್ಲಿ ತಾಳೆ ಎಣ್ಣೆ ಉತ್ಪಾದನೆ ಹೆಚ್ಚಿಸಲು ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಉತ್ತೇಜಿಸಬಹುದು ಎಂದು ಪ್ರಧಾನಿ ಅಭಿಪ್ರಾಯಪಟ್ಟರು.